Monday 11 December 2017

ನಂಬಿ ಕೆಟ್ಟವರಿಲ್ಲವೊ..

ಕೃಪೆ: LinkedIn

ಅವಳು ನಂಬಿಕೆ ದ್ರೋಹವನ್ನೆಸೆಗಿದ್ದಕ್ಕೆ ನೊಂದು, ನೆಮ್ಮದಿಯನ್ನರಸಿ ದೇವಸ್ಥಾನಕ್ಕೆ ಬಂದು ಕೂತ.

"ನಂಬಿ ಕೆಟ್ಟವರಿಲ್ಲವೋ.." ದಾಸರ ಪದ ಗುನುಗಲು ಶುರು ಆಯಿತು.

ಇಲ್ಲೂ ನೆಮ್ಮದಿಯಿಲ್ಲ ಎಂದು ಎದ್ದು ಹೊರಟ!


Thursday 7 December 2017

ಕಷ್ಟ

ಕೃಪೆ: http://images.asianage.com

"ಕಷ್ಟ ಮನುಷ್ಯನಿಗ್ ಬರ್ದೇ ಮರಗಳಿಗ್ ಬರುತ್ತಾ?" ಗೆಳೆಯನಿಗೆ ಸಮಾಧಾನ ಮಾಡುತ್ತಾ ಉಲಿದ.

ಮೆಟ್ರೋ ಕಾಮಗಾರಿಗೆ ಸಾಲುಸಾಲಾಗಿ ಪ್ರಾಣ ತೆತ್ತ ಮರಗಳು ಅದ ಕೇಳಿ ಗೋರಿಯಿಂದಲೇ ನಕ್ಕವು!

Wednesday 6 December 2017

ನಮ್ಮದಲ್ಲದ್ದು!


ನಮ್ಮದಲ್ಲದ್ದನ್ನು ಕೆಲವೊಮ್ಮೆ
ನಮ್ಮದೇ ಎಂದು ನಂಬುತ್ತೇವೆ
ಅದನ್ನು ಬಾಚಿ ತಬ್ಬಿಕೊಳ್ಳುತ್ತೇವೆ
ಹಿಡಿದಿಡಿದು ನಗುತ್ತೇವೆ, ಅಳುತ್ತೇವೆ, ಕನಸು ಕಾಣುತ್ತೇವೆ
ಕೊನೆಗೆ ಅದು ನಮ್ಮದಲ್ಲ ಎಂಬುದು
ಅರಿವಿಗೆ ಬರುವ ವೇಳೆಗೆ
ನಾವಾಗಲೇ ತಿರುಗಿ ಬಾರದಷ್ಟು
ದೂರ, ಬಹುದೂರ ನಡೆದಿರುತ್ತೇವೆ
ಮರಳಿ ಬರಲು ಬಯಸಿದರೂ
ಕಣ್ಣ ತುಂಬಿದ ಕಂಬನಿ
ದಾರಿ ಕಾಣದ ಹಾಗೆ ಕಂಗಾಲು ಮಾಡಿ ಬಿಟ್ಟಿರುತ್ತದೆ
ನಾವು ನಿಂತಲ್ಲೆ ನಿಂತು ಬಿಡುತ್ತೇವೆ, ಕುಸಿದು ಬಿಡುತ್ತೇವೆ!

Tuesday 28 November 2017

ಮುದ್ದು ಮೊಗ

ಕೃಪೆ : https://cdn.tinybuddha.com

ಹಿಂದಿ ಶಾಯರಿ:

Kasoor Neend ka nahi k hum usse Shikwa kare….
Kasoor to us Chehre ka he Jiski Wajah se Neend nahi Ati

ಭಾವಾನುವಾದ:

ಎಷ್ಟು ಕರೆದರೂ, ಗೋಗರೆದರೂ
ನಿದ್ದೆಯದು ಬರುತ್ತಿಲ್ಲ
ಹಾಗೆಂದು ನಿದ್ದೆಯದೇ ತಪ್ಪೆಂದು ನಾ ಚಾಡಿ ಹೇಳುತ್ತಿಲ್ಲ
ತಪ್ಪು ನಿದ್ದೆಯದ್ದಲ್ಲ, ಮಲಗಲು ಬಿಡದೆ ನಿದ್ದೆಗೆಡಿಸುತ್ತಿರುವ ಆಕೆಯ ಮುದ್ದು ಮುಖದ್ದು

ಕನಸಾಗಿ ಸಿಗು

ಕೃಪೆ: http://www.dreams.metroeve.com


ಹಿಂದಿ ಶಾಯರಿ:

Na sawaal banke mila karo,
Na jawaab banke mila karo,
Meri zindagi mera khwaab hai,
Mujhe khwaab banke mila karo…

 ಭಾವಾನುವಾದ:

ನೀನೆನಗೆ ಪ್ರಶ್ನೆಯಾಗಿ ಸಿಗದಿರು
ನೀನೆನಗೆ ಉತ್ತರವಾಗಿ ಸಿಗದಿರು
ನನ್ನೀ ಜೀವನ ನನ್ನದೇ ಸುಂದರ ಕನಸು,
ನೀನೆನಗೆ ಕನಸಾಗಿ ಸಿಗುತ್ತಿರು

ಜೊತೆಗಾರ


Friday 13 October 2017

ನಾನು ದೇವರನ್ನು ಕಂಡಿದ್ದೇನೆ!




ನಾನ್ ಕೆಲಸಕ್ ಸೇರಿ ಕೆಲ ಸಮಯ ಆದಾಗ ನನ್ ಹಲವು ಗೆಳೆಯರು ಅವರಿಗ್ ಬಂದ್ ಸಂಬಳದಲ್ಲಿ ಬೈಕನ್ನ ಕೊಂಡುಕೊಂಡ್ರು. ಕೆಲವರಂತೂ ಕಾರನ್ನೇ ಕೊಂಡ್ರು. ನನ್ ಕೈಯಲ್ಲಿ ಕೊಳ್ಳೋಕ್ ಆಗಿದ್ದು ಸೈಕಲ್ ಮಾತ್ರ. ಚಿಕ್ಕಂದ್ನಲ್ಲಿ ಗೇರ್ ಸೈಕಲ್ ಬೇಕು ಅಂತ ಅಪ್ಪನ್ನ ತುಂಬಾ ಪೀಡ್ಸಿದ್ದೆ. ಕೊಳ್ಳೋಕ್ ಆಗಿರ್ಲಿಲ್ಲ. ಆದ್ರೆ ಕೆಲಸಕ್ ಸೇರ್ದಾಗ ಮುಂದ್ಗಡೆ, ಹಿಂದ್ಗಡೆ ಎರಡೂ ಕಡೆ ಗೇರು, ಶಾಕ್ ಅಬ್ಸಾರ್ಬರು, ಮುಂದ್ಗಡೆ ಡಿಸ್ಕ್ ಬ್ರೇಕ್! ಇದೆಲ್ಲಾ ಇರೋ ಒಂದು ಚೆಂದದ ಸೈಕಲನ್ನ ಡೆಕತ್ಲಾನಲ್ಲಿ ತೆಗೊಂಡೆ. ದಿನಾ ಅಳವೆಡೆಗೆ ಸೈಕಲಲ್ಲೇ ಓಡಾಡೋಕೆ ಶುರು ಮಾಡಿದೆ. 
ನಂಗಂತೂ ಭಾರಿ ಖುಷಿ! ವೈಟ್ ಫೀಲ್ಡ್ ತುಂಬಾ ಟ್ರಾಫಿಕ್ ಇರೋದ್ರಿಂದ ಬೈಕು, ಕಾರು, ಬಸ್ಸಿಗಿಂತ ಸೈಕಲಲ್ಲೇ ಬೇಗ ತಲ್ಪ್ ಬಹುದಿತ್ತು. ದೇಹಕ್ ಸ್ವಲ್ಪ ವ್ಯಾಯಾಮಾನೂ ಆಗೋದು, ದುಡ್ಡೂ ಉಳಿಯೋದು! ಅಷ್ಟೇ ಅಲ್ದೆ, "ಆಫೀಸಿಗ್ ಹೇಗ್ ಓಡಾಡ್ತಿಯಾ?" ಅಂತ ಯಾರದ್ರೂ ಕೇಳ್ದಾಗ, "ಸೈಕಲಲ್ಲಿ" ಅನ್ನೋವಾಗ ಮುಖದಲ್ಲೊಂದು ಮಂದಹಾಸ ಗೊತ್ತಿಲ್ದೆ ಪ್ರತ್ಯಕ್ಷ ಆಗೋದು. ಕೇಳಿಸ್ಕೊಂಡೋರು ಹುಬ್ಬೇರಿಸ್ಕೊಂಡು, "ಕಾರಲ್ಲಿ ಬೈಕಲ್ಲಿ ಓಡಾಡೋಕಿಂತ ಬೆಸ್ಟ್ ಅದು! ತಲೆ ನೋವ್ ಇರಲ್ಲ" ಅನ್ನೋರು. "ಹೌದು! ನೀವೂ ಒಂದ್ ಸೈಕಲ್ ತೆಗೊಂಡು ಸೈಕಲಲ್ಲೇ ಓಡಾಡಿ" ಅಂತ ನಾನ್ ಅಂದ್ರೆ, ನಕ್ಕೊಂಡು ವಿಷ್ಯ ಬದಲಾಯಿಸೋರು!

ಹೀಗೆ ಹೋದ್ ವರ್ಷ ಸೆಪ್ಟೆಂಬರ್ ಸಮಯದಲ್ಲಿ ಅಳವೆಡೆಗ್ ಹೋಗೇ ತಿಂಡಿ ತಿನ್ನೋಣ ಅಂದ್ಕೊಂಡು ಸೈಕಲ್ ತುಳ್ಕೊಂಡು ಹೋಗ್ತಾ ಇದ್ದೆ. ಅಷ್ಟಾಗಿ ಟ್ರಾಫಿಕ್ ಇರ್ಲಿಲ್ಲ. ತಲೆಲಿ ಯಾವ್ದೋ ಹಾಡು ಓಡ್ತಾ ಇತ್ತು. ಹಂಗೆ ಹಾಡ್ ಗುನುಗ್ತಾ ಹೋಗ್ಬೇಕಾದ್ರೆ ಸಡನ್ ಆಗಿ ಒಂದ್ ಆಟೋ ನಂಗ್ ಗುದ್ತು. ನಂಗ್ ಅರಿವಾಗೋ ಮೊದ್ಲೇ ನಾನ್ ಸೈಕಲಿಂದ ಜಿಗ್ದು ರಸ್ತೆಗ್ ಮುಖ ಮಾಡಿ ಬಿದ್ದಿದ್ದೆ. ಟಾರ್ ಕಿತ್ತೋದ್ ರಸ್ತೆ ಅಂತ ಸುಮಾರ್ ಸಲ ಬೈಕೊಂಡಿದ್ದಕ್ಕೊ ಏನೋ, ಎರಡ್ ದಿನದ್ ಹಿಂದೆ ಹೊಸ್ದಾಗಿ ಟಾರ್ ಹಾಕಿ ರಸ್ತೆ ಫಳ ಫಳ ಹೊಳಿತಾ ಇತ್ತು. ಬಿದ್ ಹೊಡೆತಕ್ಕೆ ಗಲ್ಲ ರಸ್ತೆಗೆ ಬಡ್ದು ಗಾಯ ಆಗಿ ಗಲ್ಲದಿಂದ ರಕ್ತ ಸುರಿಯೋಕ್ ಶುರು ಆಯ್ತು. ಆಟೊ ಕಡೆ ಕಷ್ಟಪಟ್ ಕಣ್ ಹಾಯಿಸ್ದೆ. ಅವ್ನು ನಿಲ್ಲಿಸ್ದೆ ಹಂಗೆ ಮುಂದ್ ಹೋಗ್ಬಿಟ್ಟಿದ್ದ. ಸೈಕಲ್ ಒಂದ್ ಕಡೆ, ನಾನ್ ಒಂದ್ ಕಡೆ. ಖಾಲಿ ಹೊಟ್ಟೆಲಿ ಇದ್ದಿದ್ರಿಂದ, ಅದ್ರಲ್ಲೂ ರಕ್ತ ಸುರಿಯೋಕ್ ಶುರು ಆಗಿದ್ರಿಂದ ತಲೆ ಸುತ್ತೋಕ್ ಶುರು ಆಯ್ತು.

ಕಾಲು ತುಂಬಾ ನೋವ್ ಆದ್ ಹಾಗ್ ಆಯ್ತು. ನೋಡಿದ್ರೆ ಜೀನ್ಸ್ ಪ್ಯಾಂಟು ಹರಿದು ಮಂಡಿಗೆ ಗಾಯವಾಗುವಷ್ಟು ಜೋರಾಗಿ ತರ್ಚಿತ್ತು. ರಸ್ತೆಗ್ ಎಡಗೈ ಊರಿ ಮೇಲ್ ಏಳೋಣ ಅಂತ ಪ್ರಯತ್ನ ಪಟ್ಟೆ. ಕೈಗೆ ಬಲವೇ ಇಲ್ಲದ ಹಾಗ್ ಇತ್ತು. ನೋಡಿದ್ರೆ ಬೆರಳುಗಳು ರಸ್ತೆ ಜೊತೆ ತಿಕ್ಕಾಟ ನಡ್ಸಿ, ಚರ್ಮ ಕಿತ್ ಹೋಗಿ, ಮೂರು ಬೆರಳುಗಳಿಂದ ರಕ್ತ ಸುರಿತಾ ಇತ್ತು. 
ಅಷ್ಟರಲ್ಲಿ ಯಾರೋ ಆಟೋದವರು ಬಂದು ಮುಖಕ್ ನೀರ್ ಹಾಕಿ, ಕುಡಿಯೋಕ್ ನೀರ್ ಕೊಟ್ರು. ತಲೆ ಸುತ್ತುತ್ತಾ ಇದ್ದದ್ದರಿಂದ ನಂಗ್ ಎಲ್ಲವೂ ಅಸ್ಪಷ್ಟ ಕಲಾಕೃತಿಗಳ್ ತರ ಕಾಣ್ತಾ ಇದ್ವು. ನನ್ ಸುತ್ತ ೪-೫ ಜನ ಇದ್ದದ್ ಮಾತ್ರ ಗೊತ್ತು. ಗಲ್ಲಕ್ಕೆ, ಮುಖಕ್ಕೆ ಗಾಯ ಆಗಿದ್ರಿಂದ ಅವ್ರು ಕೇಳಿದ್ ಪ್ರಶ್ನೆಗೆ ಬಾಯಿ ಬಿಟ್ಟು ಉತ್ರಾನೂ ಕೊಡೋಕ್ ಆಗ್ತಾ ಇರ್ಲಿಲ್ಲ. 
ಆಗ ಯಾರೋ, "ಬಾ ಗಾಡಿ ಹತ್ತು" ಅಂತ ಅವನ್ ಸ್ಕೂಟಿ ಮೇಲ್ ಕೂರೋಕ್ ಹೇಳ್ದ. ಅಲ್ಲಿದ್ ನಾಲ್ಕೈದ್ ಜನ್ರಲ್ಲಿ ಯಾರೋ ಸೈಕಲ್ಲನ್ನ ರಸ್ತೆಯ ಬದಿಯಲ್ ಇಟ್ಟು ಬೀಗ ಹಾಕಿ, ಓಡಿ ಬಂದು ಬೀಗದ್ ಕೈಯನ್ನ ನನ್ ಬೆನ್ಚೀಲ (bag pack) ದಲ್ಲಿ ಹಾಕಿದ. ನಾ ಕಷ್ಟದಲ್ಲಿ ಸ್ಕೂಟಿ ಹತ್ತಿ ಕೂತೆ. ಸ್ಕೂಟಿಯವ ಗಾಡಿ ಓಡಿಸ್ತಾ, "ಏನಾಯಿತು?" "ಯಾರು ಗುದ್ದಿದ್ದು?" ಅಂತೆಲ್ಲಾ ಕೇಳ್ತಾ ಇದ್ದ. ನಾನು ಉತ್ರಾ ಕೊಡೋಕೆ ಪ್ರಯತ್ನ ಪಡ್ತಾ ಇದ್ದೆ. ಆದ್ರೆ ತಲೆ ಸುತ್ತು ಜೋರಾಗಿ ಗಾಡಿಯಿಂದ ಬೀಳೋ ತರ ಅನ್ಸಿ ಭಯ ಆಗೋಕ್ ಶುರುವಾಗಿ "ನಾನ್ ತಲೆ ಸುತ್ತಿ ಬೀಳ್ತೀನಿ ಅನ್ನಿಸ್ತಾ ಇದೆ" ಅಂತ ಹೇಳ್ದೆ. ಅವ್ನು "ಎರಡೇ ನಿಮಿಷ ಗಟ್ಟಿಯಾಗ್ ಕೂತ್ಕೋ ಇಲ್ಲೇ ಒಂದ್ ಕ್ಲಿನಿಕ್ ಇದೆ" ಅಂದ. ವೇಗವಾಗ್ ಹೋಗಿ ಆ ಕ್ಲಿನಿಕ್ ಮುಂದೆ ನಿಲ್ಲಿಸ್ದ. ಕ್ಲಿನಿಕ್ ತೆರ್ದಿದ್ರೂ ಡಾಕ್ಟರ್ ಕಾಣ್ಲಿಲ್ಲ. ನನಗ್ ಒಳಗ್ ಕೂರೋಕ್ ಹೇಳಿ, ಓಡಿ ಹೋಗಿ ಡಾಕ್ಟರನ್ನ ಕರ್ಕೊಂಡ್ ಬಂದ. 

ಕೈಗೆ ಬಲವೇ ಇಲ್ಲದ್ ಹಾಗ್ ಆಗಿದ್ ನೋಡಿ ನಂಗೆ ಮೂಳೆ ಮುರ್ದ್ ಹೋಗಿದೆ ಅಂತ ಅಳುಕು ಶುರು ಆಯ್ತು. ಡಾಕ್ಟರ್ ಬಂದು ಗಾಯಗಳನ್ನ ನೋಡಿ ಒಂದಿಷ್ಟು ಮಾತ್ರೆ, ಚುಚ್ಚು ಮದ್ದು, ಮುಲಾಮುಗಳನ್ನ ಬರೆದ್ಕೊಟ್ಟು, ತರೋಕ್ ಹೇಳಿದ್ರು. ಅವ್ನು ತರೋಕ್ ಹೊರಡ್ತಾ ಇದ್ ಹಾಗೆ ಅವ್ನಿಗ್ ನನ್ ಪರ್ಸನ್ನ ಕೊಟ್ಟೆ. ಅವನು ನನ್ನ ಪರ್ಸಿನಲ್ಲಿ ೫೦೦ ರೂಪಾಯಿ ಇದ್ದದ್ದನ್ನ ನೋಡಿ, "ಇರಲಿ ಊಟಕ್ಕೆ, ಡಾಕ್ಟರ್ ಫೀಸಿಗೆ ಬಾಕಾಗ್ಬಹುದು, ಇಟ್ಕೊ ನಂಗೆ ಆಮೇಲೆ ಕೊಡೋವಂತೆ" ಅಂತ ಹೇಳಿ ಪರ್ಸ್ ಇಟ್ಟು, ಮೆಡಿಕಲ್ಸ್ ಗೆ ಹೋಗಿ ಅದನ್ನೆಲ್ಲಾ ತಂದುಕೊಟ್ಟು, ವೈದ್ಯರು ಶುಶ್ರೂಷೆ ಮಾಡಲು ಶುರು ಮಾಡ್ತಾ ಇದ್ ಹಾಗೆ "ನಂಗೆ ಒಂದು ಮೀಟಿಂಗ್ ಇದೆ, ಸ್ವಲ್ಪ ತಡ ಆಗ್ತಾ ಇದೆ, ನಾನ್ ಹೋಗಿರ್ತೀನಿ, ನೀನು ಮನೆಗ್ ಹುಶಾರಾಗಿ ತಲ್ಪು, ಆಫೀಸಿಗೆಲ್ಲಾ ಹೋಗ್ಬೇಡ" ಅಂತ ನಕ್ಕು ಹೊರಟ. ನಾನು ನನ್ ಫೊನ್ ಕೊಟ್ಟು "ನಿನ್ ನಂಬರ್ ಸೇವ್ ಮಾಡ್ಕೊಡು" ಅಂದೆ. 'ಆಕಾಶ್' ಅಂತ ಉಳಿಸಿ ಹೋದ. 

ನಾನು ಕ್ಲಿನಿಕ್ ಮುಂದೇನೆ ಇದ್ ಬಸ್ ನಿಲ್ದಾಣಕ್ ಹೋಗಿ ಬಸ್ ಹತ್ತಿ ಮನೆ ಸೇರ್ಕೊಂಡೆ. ಸ್ವಲ್ಪ ಹೊತ್ತು ಸುಧಾರಿಸ್ಕೊಂಡೆ. ಆಗ ಮಾತ್ರೆ ನೆನಪ್ ಆಯ್ತು. ಮಧ್ಯಾಹ್ನ ಮಾತ್ರೆ ತೆಗೊಳ್ಳೋ ಮೊದ್ಲು ಊಟ ಮಾಡ್ಬೇಕಲ್ಲ! ಊಟ ತರೋಕ್ ಹೋಗೋಕೂ ಆಗದ ಸ್ಥಿತಿಯಲ್ಲಿದ್ದೆ. ಗೆಳೆಯ ಭರತನಿಗೆ ಫೋನು ಹಾಯಿಸ್ದೆ. ಅವನು ಪಾಪ ಅಳವೆಡೆಗ್ ಹೋಗೋ ಹಾದಿಯಲ್ಲಿ ಒಂದು ಹೋಟೆಲ್ನಲ್ಲಿ ಮೊಸ್ರನ್ನ ಕಟ್ಟಿಸ್ಕೊಂಡು ನನ್ ಕೋಣೆಗ್ ತಂದು ಕೊಟ್ಟು, ಆರೋಗ್ಯ ವಿಚಾರ್ಸಿ ಹೋದ. ಉಂಡು, ಮಾತ್ರೆ ತೆಗೊಂಡ್ ಮಲಗಿದವ್ನಿಗೆ ಸಂಜೆ ಹೊತ್ತಿಗೆ, ರಸ್ತೆ ಬದಿಯಲ್ಲೇ ನಿಲ್ಲಿಸಿ ಬಂದ ಸೈಕಲ್ಲಿನ್ ನೆನಪಾಯ್ತು. ಗಾಬರಿಯಾಗಿ ಗೆಳೆಯ ಪ್ರಶಾಂತನಿಗ್ ಕರೆ ಮಾಡಿ ನಡೆದ ಸಂಗತಿ ತಿಳಿಸ್ದೆ. ಅವನೂ ನನ್ನ ಥರ ಸೈಕಲ್ ಸವಾರ. ಓಡಿ ಬಂದು, ಆ ಆಟೋದವ್ನಿಗೆ ಶಪಿಸಿ ನನ್ನೊಡನೆ ಸೈಕಲ್ ಇಟ್ಟ ಜಾಗದೆಡೆಗ್ ಹೆಜ್ಜೆ ಹಾಕ್ದ. ಅಲ್ಲಿಗ್ ಹೋಗಿ ನೋಡಿದ್ರೆ ನಾನಿಟ್ ಜಾಗದಲ್ಲಿ ಸೈಕಲ್ ಇರ್ಲಿಲ್ಲ. ತಲೆ ಕೆಟ್ಟ್ ಹೋದಾಗ್ ಆಯ್ತು! ಏನ್ ಮಾಡೋಕೂ ತೋಚ್ಲಿಲ್ಲ. ಪಕ್ಕದಲ್ಲೇ ಒಂದು 'ಕಾಫಿ ಡೇ' ಇತ್ತು. ಅದ್ರ ಸೆಕ್ಯೂರಿಟಿ ಗಾರ್ಡ್ ಹತ್ರ ಹೋಗಿ "ಬೆಳಿಗ್ಗೆ ಇಲ್ಲಿ ಆಕ್ಸಿಡೆಂಟ್ ಆದಾಗ ಸೈಕಲನ್ನ ಇಲ್ಲೇ ಬಿಟ್ ಹೋಗಿದ್ದೆ, ನೀವ್ ನೋಡಿದ್ರಾ?" ಅಂತ ಕೇಳ್ದೆ. ಅವನು "ಹಾ! ರಸ್ತೆಯಲ್ಲೇ ಇದ್ರೆ ಯಾರಾದ್ರೂ ಕದ್ಗೊಂಡು ಹೋಗ್ಬಹುದು ಅಂತ ನಮ್ ಬೇಸ್ಮೆಂಟಲ್ಲಿ ಪಾರ್ಕ್ ಮಾಡಿದೀನಿ. ಬನ್ನಿ ಕೊಡ್ತೀನಿ" ಅಂದ. ಅವ್ನ್ ಕಾಳಜಿ ನೋಡಿ ಅತೀವವಾಗ್ ಖುಷಿ ಆಯ್ತು. ಬೇಸ್ಮೆಂಟಿಗ್ ಹೋಗಿ ಸೈಕಲ್ ತೆಗೊಂಡು,ಸೆಕ್ಯೂರಿಟಿಗೆ ನನ್ನಿ ಹೇಳಿ ಅಲ್ಲಿಂದ ಹೊರಟ್ವಿ. ನಂಗೆ ಕೈ ಏಟಾಗಿದ್ರಿಂದ ಕೋಣೆ ತಂಕ ಪ್ರಶಾಂತನೇ ಸೈಕಲನ್ನ ತಳ್ಕೊಂಡು ಬಂದು ನಿಲ್ಸಿ ಹೋದ. ಕೈ ಸರಿ ಹೋಗೋಕೆ ಡಾಕ್ಟರ್ರು ಕ್ರೇಪ್ ಬ್ಯಾಂಡೇಜ್ ಹಾಕೋಳೋಕ್ ಹೇಳಿದ್ರು. ನಂಗೆ ಒಂದ್ ಕೈಯಲ್ಲಿ ಸರ್ಕಸ್ ಮಾಡಿ ಹಾಕೊಳ್ಳೊಕ್ ಆಗಲ್ಲ ಅಂತ ಗೆಳೆಯ ಸಚಿನ್ ದಿನಾ ಬೆಳಿಗ್ಗೆ ಕ್ರೇಪ್  ಬ್ಯಾಂಡೇಜ್ ಹಾಕಿ ಅಳವೆಡೆಗೆ ಜೊತೆಗ್ ಕರ್ಕೊಂಡು ಹೋಗಿ, ವಾಪಸ್ಸು ಬರ್ತಾ ಬಿಡ್ತಾ ಇದ್ದ. ಇವ್ರೆಲ್ಲರ್ ಸಹಾಯ್ದಿಂದ ಅಂತ ಒಂದ್ ಸಂಕಷ್ಟದ್ ಸ್ಥಿತಿನ ಸುಲಭ್ವಾಗ್ ನಿಭಾಯಿಸೋ ಹಾಗಾಯ್ತು. ತಡ್ಕೊಳಕ್ ಆಗ್ದೇ ಇರೋ ಅಷ್ಟು ನೋವ್ ಇದ್ರೂ, ಎಲ್ರ ಕಾಳಜಿಯಿಂದ, ಅಕ್ಕರೆಯಿಂದ ನಾ ಕಳ್ದ್ ಹೋಗಿದ್ದೆ.

"ದೇವರು ಒಬ್ಬ, ಹೆಸರು ಹಲವು" - ಈ ಮಾತನ್ನ ಚಿಕ್ಕಂದಿನಿಂದ ಕೇಳಿದ್ದೆ. ಆದ್ರೆ ಈ ಘಟನೆಯಿಂದ, ನನ್ ಪರಿಚಯಾನೇ ಇಲ್ಲದಿದ್ದ್ರೂ ಕ್ಲಿನಿಕ್ ಗೆ ಕರ್ಕೊಂಡು ಹೋಗಿ, ಅವನೇ ₹250 ಯ ಮದ್ದು ಕೊಡಿಸಿ, ಹಿಂಪಡೆಯೋಕೆ ಸಿಗ್ತೀನಿ ಅಂತ ಹೇಳಿ ಒಂದ್ ವರ್ಷ ಆದ್ರೂ ಸಿಗದ ಆಕಾಶನಲ್ಲಿ, ಸೈಕಲ್; ರಸ್ತೆ ಬದಿಯಿದ್ದರೆ ಯಾರಾದರೂ ಕದೀಬಹುದು ಅಂತ ಕಾಳಜಿಯಿಂದ ಭದ್ರವಾಗ್ ಇಟ್ಟ ಸೆಕ್ಯೂರಿಟಿಯಲ್ಲಿ, ಮಧ್ಯಾಹ್ನ ಊಟ ತಂದ್ ಕೊಟ್ ಭರತನಲ್ಲಿ, ತನ್ ಕೆಲ್ಸ ಬಿಟ್ಟು ನನ್ ಜೊತೆ ಇದ್ ಪ್ರಶಾಂತನಲ್ಲಿ, ದಿನಾ ಕ್ರೇಪ್ ಬ್ಯಾಂಡೇಜ್ ಹಾಕಿ ಅಳವೆಡೆಗ್ ಕರೆದೊಯ್ದು, ಕರೆ ತರ್ತಾ ಇದ್ ಸಚಿನನಲ್ಲಿ ನಾನ್ ದೇವ್ರನ್ನ ಕಂಡಿದ್ದೇನೆ! ಈ ಹಲವು ಹೆಸರುಗಳಲ್ಲಿ ಕಂಡಿದ್ದೇನೆ. "ಪ್ರತಿಫಲ ಬಯಸದೇ ತೋರಿದ ಕರುಣೆಯು ಮೊದಲು ಮನುಜನೆಂಬ ಸಾರ್ಥಕತೆಯ ನೆಮ್ಮದಿ ತರುವುದು" ಅನ್ನೋ ಸಾಲಿನಂತೆ, ಪ್ರತಿಫಲ ಬಯಸ್ದೇ ತೋರೋ ಮಾನವೀಯತೆನೇ ದೈವತ್ವ, ಅದನ್ನ ತೋರುವವ್ರೇ ದೇವರು! ಅಲ್ವಾ?

Thursday 24 August 2017

ಕಜ್ಜಾಯ ತಸ್ಮೈ ನಮಃ

ಕೃಪೆ: ಗೂಗಲ್

"ಬಿಸಿ ಬಿಸಿ ಕಜ್ಜಾಯ, ರುಚಿ ರುಚಿ ಕಜ್ಜಾಯ ಮಾಡಿ ಕೊಡಲೆ ನಾನು? ಇಗೋ ತಿನ್ನು"

ಇದೇನಪ್ಪ ಗಣೇಶ ಹಬ್ಬದ್ ಟೈಮಲ್ಲಿ ಮೋದಕ, ಲಾಡು ಬಗ್ಗೆ ಮಾತಾಡೋದ್ ಬಿಟ್ಟು ಕಜ್ಜಾಯದ್ ಬಗ್ಗೆ ಏನಕ್ ಮಾತಾಡ್ತಾ ಇದಾನೆ ಅಂದ್ಕೋತಾ ಇದಿರಾ? ಆಫೀಸ್ ಪಕ್ಕ ಇರೋ ಪುಲ್ಲಾ ರೆಡ್ಡಿ ಸಿಹಿ ತಿಂಡಿ ಅಂಗ್ಡೀಲಿ ಕಜ್ಜಾಯ ನೋಡ್ದಾಗ ಮನ್ಸಲ್ಲಿ ಈ ಹಾಡು ಪ್ಲೇ ಆಗೋಕ್ ಶುರು ಆಯ್ತು! ಈ ಹಾಡು ಕ್ಯಾಚಿ ಆಗಿ ಇದ್ದಿದ್ದಕ್ಕೋ ಇಲ್ಲ ಅದ್ರಲ್ಲಿ ಕಜ್ಜಾಯ ಮಾಡ್ ಕೊಡ್ತೀನಿ ಅಂತ ಇದ್ದಿದ್ದಕ್ಕೋ, ಚಿಕ್ಕಂದ್ನಲ್ಲಿ ಸಕ್ಕತ್ ಇಷ್ಟ ಆಗಿತ್ತು. ಸಿಹಿ ತಿಂಡಿಗಳ ವಿಚಾರದಲ್ಲಿ ಬೇಧ ಭಾವ ಮಾಡ್ದೆ, ವಿವಿಧತೆಯಲ್ಲಿ ಏಕತೆ ಕಾಣುವ ನನಗೆ ಜಿಲೇಬಿ, ಜಹಾಂಗೀರ್, ಹಲ್ವಾ, ಪಾಯಸ, ಜಾಮೂನು,ಮೈಸೂರ್ ಪಾಕ್.. ಈ ಎಲ್ಲಾ ಸಿಹಿ ತಿಂಡಿಗಳೂ ಮೆಚ್ಚಿನವೇ. ಆದರೆ ಕಜ್ಜಾಯದ ಬಗ್ಗೆ ವಿಶೇಷವಾದ ಮೆಚ್ಚುಗೆ ಮತ್ತೆ ಆಸೆ! ಚಿಕ್ಕವ್ನಿರ್ತಾ ನಮ್ಮೂರಲ್ಲಿ ಸುರೇಶ್ ಭಟ್ರು, ಬಾಯಲ್ ನೀರೂರೋ ಹಾಗಿನ್ ತುಪ್ಪದ ಕಜ್ಜಾಯ ಮಾಡ್ತಾ ಇದ್ರು. ಅವ್ರು ಕಜ್ಜಾಯ ಮಾಡೋದ್ ನಿಲ್ಸಿದ್ ಮೇಲೆ ಅಷ್ಟ್ ರುಚಿಯಾದ್ ಕಜ್ಜಾಯ ಬೇರೆಲ್ಲೂ ಸಿಗ್ಲೇ ಇಲ್ಲ. ಅಂತ ಕಜ್ಜಾಯಾನಾ ಮತ್ತೆ ತಿನ್ನೋಕೆ ನಾಲ್ಗೆ ಕಾಯ್ತಾನೇ ಇತ್ತು.

೨೦೧೪ರಲ್ಲಿ ನಾನು ಟ್ರೈನಿಂಗ್ ಮುಗ್ಸಿ ಬೆಂಗಳೂರು ಶಾಖೆಲಿ ಕೆಲಸ ಮಾಡೋಕ್ ಶುರು ಮಾಡ್ದೆ. ಕಂಪ್ಯೂಟರ್‌ ಜೊತೆ ಗೆಳೆತನ ಮಾಡ್ಕೊಂಡು, ಅದ್ರ್ ಜೊತೆನೇ ವೇಳೆ ಕಳೀತಾ, ನಕ್ರೆ ಎಲ್ಲಿ ಮುತ್ತು ಉದ್ರತ್ತೋ ಅಂತ ಮುಖ ಗಂಟ್ ಹಾಕ್ಕೊಂಡ್ ಇರೋ ಜನ್ರೇ ಪ್ರಾಜೆಕ್ಟ್ ಅಲ್ಲಿ ತುಂಬ್ಕೊಂಡ್ ಇದ್ರು. ಸ್ವಲ್ಪ ತಿಂಗ್ಳ್ ಆದ್ಮೇಲೆ ನಾನು ಅದೇ ಪ್ರಾಜೆಕ್ಟಿನ್ ಇನ್ನೊಂದ್ ತಂಡ ಸೇರ್ಕೊಂಡೆ. ಅಲ್ಲಿ ಇನ್ನೊಂದ್ ತರಹದ ಗೋಳು! ನಾವು ಒಂದ್ ವಾರ ಬೆಳಿಗ್ಗೆ, ಒಂದ್ ವಾರ ಮಧ್ಯಾಹ್ನ, ಒಂದ್ ವಾರ ರಾತ್ರಿ ಅಂದ್ಕೊಂಡು ಒಂದೊಂದ್ ವಾರ ಒಂದೊಂದ್ ಪಾಳಿಯಲ್ಲಿ ಕೆಲ್ಸ ಮಾಡ್ಬೇಕಿತ್ತು. ಪ್ರತೀ ಪಾಳಿಯಲ್ಲಿ ಇಬ್ರು; ಹೆಚ್ಚೆಂದ್ರೆ ಮೂರ್ ಜನ ಇರ್ತಿದ್ರಿಂದ; ಒಬ್ರು ಯಾವಾಗ್ಲೂ ಕಂಪ್ಯೂಟರ್ ಮುಂದೇ ಝಾಂಡಾ ಊರ್ಬೇಕಾಗಿದ್ರಿಂದ, ಊಟಕ್ಕೆ ತಿಂಡಿಗೆ ಒಬ್ನೇ ಹೋಗ್ಬೇಕಾದ್ ಅನಿವಾರ್ಯತೆ ಇತ್ತು. ದೊಡ್ಡ ಗುಂಪಲ್ಲೇ ಹೋಗಿ ಅಭ್ಯಾಸ ಇದ್ದ ನಂಗೆ ಊಟಕ್ಕೆ ಚಹಾಕ್ಕೆ ಅಬ್ಬೇಪಾರಿ ತರ ಒಬ್ಬೊಬ್ನೇ ಹೋಗೋದು ಸಂಕಟದ್ ವಿಷ್ಯ ಆಗಿತ್ತು. ಯಾರ್ ಜೊತೆನೂ ಅಷ್ಟಾಗಿ ಗೆಳೆತನ, ಸಲಿಗೆ ಇರ್ಲಿಲ್ಲ.

ಹೀಗಿದ್ದಾಗ ಒಮ್ಮೆ ರಾತ್ರಿ ಪಾಳಿ ಮಾಡೋವಾಗ ಅನೂಪನ್ ಪರಿಚಯ ಆಯ್ತು. 'ಎಲ್ಲರೊಳಗೊಂದಾಗು ಮಂಕುತಿಮ್ಮ' ಅನ್ನೋ ಕಗ್ಗದ್ ಸಾಲಿಗೆ ಎತ್ತುಗೆ (example) ಅನ್ನೋ ತರಹ ಎಲ್ಲರ್ ಜೊತೆ ನಗ್ ನಗ್ತಾ ಮಾತಾಡ್ತಾ, ಯಾರ್ ಜೊತೆನೂ ಕಿರಿಕ್ ಮಾಡ್ಕೊಳ್ದೆ, ಯಾವ್ದಕ್ಕೂ ಜಾಸ್ತಿ ತಲೆ ಕೆಡ್ಸ್ಕೊಳ್ದೆ, ಯಾವಾಗ್ಲೂ ಮುಗುಳ್ನಗೆ ಬೀರ್ತಿದ್ದ ಅವ್ನನ್ನ ನೋಡಿ ಕೊನೆಗೂ ಒಬ್ಬ ಗೆಳೆಯ ಸಿಕ್ಕ ಅನ್ನಿಸ್ತು. ಜೊತೆಲಿ ಊಟ ಮಾಡ್ತಾ, ಚಹಾ ಹೀರ್ತಾ, ಕಷ್ಟ ಸುಖ ಮಾತಾಡ್ತಾ, ಓತ್ಲಾ ಹೊಡಿತಾ, ಸಿನೆಮಾ ನೋಡ್ತಾ ಅತೀ ಕಡಿಮೆ ಸಮಯದಲ್ಲೇ ತುಂಬಾ ಆಪ್ತ ಆಗ್ಬಿಟ್ಟ ಅನೂಪ!

ಒಂದ್ಸಲ ಅವ್ನು ಮೈಸೂರಿಗ್ ಹೋದಾಗ ಅಲ್ಲಿನ್ ಒಂದ್ ಅಂಗ್ಡಿ ಇಂದ ಕಜ್ಜಾಯ ತಂದಿದ್ದ. ತಿಂತಾ ಇದ್ ಹಾಗೆ ಸುರೇಶ್ ಭಟ್ರ ಕಜ್ಜಾಯ ನೆನ್ಪಿಗ್ ಬಂತು! ಕೊನೆಗೂ ಆ ರುಚಿಗ್ ಸಮನಾದ ಕಜ್ಜಾಯ ಸಿಕ್ಕಿತ್ತು. ನಂಗಂತೂ ಭಯಂಕರ ಖುಷಿ, ಇನ್ಮುಂದೆ ಕಜ್ಜಾಯ ತಿನ್ನೋ ಆಸೆ ಆದ್ರೆ ಅವ್ನಿಗ್ ಊರಿಗ್ ಹೋದಾಗ ತರೋಕ್ ಹೇಳ್ಬಹುದು ಅಂತ! ರಾತ್ರಿ ಪಾಳಿಲಿ ಕೂತು ಇಬ್ರೂ ಕಜ್ಜಾಯ ತಿಂದಿದ್ದೇ ತಿಂದಿದ್ದು. ಏನೋ ಒಂತರಾ ತೃಪ್ತಿಯಾಗಿತ್ತು.

ಒಂದೆರ್ಡ್ ತಿಂಗ್ಳ್ ಆದ್ಮೇಲೆ ಒಂದ್ ಶನಿವಾರ ಅನೂಪ ಮೈಸೂರಿಗ್ ಹೋದಾಗ ನಂಗೆ ಕಜ್ಜಾಯದ್ ಆಸೆ ಆಗಿ ಥಟ್ ಅಂತ ಅವ್ನಿಗೆ "ಮಗಾ.. ಬರ್ತಾ ಕಜ್ಜಾಯ ತಾರೋ.. ತಿನ್ನೋಕ್ ಆಸೆ ಆಗ್ತಾ ಇದೆ.." ಅಂತ ಒಸಗೆ (message) ಕಳ್ಸ್ದೆ. ಅವ್ನು "ಕೆಲ್ಸ ಇದೆ ಮಗಾ.. ತರೋಕ್ ಆಗೋದ್ ಡೌಟು.. ಆದ್ರೆ ತರ್ತೀನಿ" ಅಂತ ಉತ್ರ ಕೊಟ್ಟ. ಅದ್ರ ಮುಂದಿನ್ ವಾರ ನಾನು ಬೆಳಿಗ್ಗೆ ಪಾಳಿಲ್ ಇದ್ದೆ, ಅನೂಪ ರಾತ್ರಿ ಪಾಳಿಲ್ ಇದ್ದ. ಸೋಮ್ವಾರ ನಾನ್ ಅಳವೆಡೆಲ್ (office) ಇದ್ದಾಗ ಅನೂಪನ್ ಒಸಗೆ ಬಂತು "ಸಾರಿ ಮಗಾ.. ಕಜ್ಜಾಯ ತರೋಕ್ ಆಗಿಲ್ಲ" ಅಂತ. ಕಜ್ಜಾಯ ಸಿಗತ್ತೆ ಅಂತ ಆಸೆಲ್ ಇದ್ ನಂಗೆ ಆಶಾಭಂಗ ಆಯ್ತು. ಆದ್ರೂ "ಪರ್ವಾಗಿಲ್ಲ ಮಗಾ.. ಮುಂದಿನ್ ಸಲ ಹೋದಾಗ ತಾ" ಅಂದೆ. ಇದಾದ್ ಎರ್ಡ್ ದಿನಕ್ಕೆ ನನ್ ಹುಟ್ಟುಹಬ್ಬ ಇತ್ತು.

ನನ್ ಹುಟ್ಟುಹಬ್ಬ ಅಂತ ಗೆಳೆಯರೆಲ್ಲ ಕೇಕ್ ತಂದಿದ್ರು. ೧೨ ಗಂಟೆಗೆ ಕೇಕ್ ಕತ್ತರಿಸಿ, ಹುಟ್ದಬ್ಬ ಆಚರ್ಸಿ ತಡವಾಗ್ ಮಲ್ಗಿ, ಬೆಳಿಗ್ಗೆ-ಪಾಳಿ ಇದ್ದದ್ರಿಂದ ಬೇಗ ಎದ್ದು ೬ ಗಂಟೆ ಸುಮಾರಿಗೆ ಅಳವೆಡೆಗೆ ಬಂದೆ. ನಾನ್ ಬರೋ ಮೊದ್ಲೆ ಅನೂಪ ಹೊರಟ್ ಹೋಗಿದ್ದ. ನಾನು ನನ್ ಕಂಪ್ಯೂಟರ್ ಮುಂದೆ ಹೋಗಿ ಕೂತೆ. ಅದ್ರ್ ಪಕ್ಕ ಒಂದ್ ಕವರ್ ಇತ್ತು. ಏನಪ್ಪ ಅಂತ ತೆಗ್ದ್ ನೋಡಿದ್ರೆ ಅದ್ರ್ ಒಳಗೆ ಪುಟ್ಟ ಡಬ್ಬಿ ಇತ್ತು. ಇದೇನಿದು ಅಂತ ಕುತೂಹಲ್ದಿಂದ ತೆಗ್ದ್ ನೋಡಿದ್ರೆ ಅದ್ರಲ್ಲಿ ನನ್ನ ನೆಚ್ಚಿನ ಕಜ್ಜಾಯ ಇತ್ತು! ಉತ್ಸಾಹದಿಂದ ಮತ್ತೆ ಕವರ್ ಕಡೆ ಕಣ್ ಹಾಯಿಸ್ದೆ. ಅದ್ರಲ್ಲಿ ಕನ್ನಡದ್ ಟಿ ಶರ್ಟು ಮತ್ತೆ 'Happy Birthday' ಅನ್ನೋ ಹಾರೈಕೆ ಇತ್ತು! ನಂಗೆ ಕನ್ನಡ ಟಿ ಶರ್ಟ್ ಅಂದ್ರೆ ಇಷ್ಟ ಅಂತ ಅದನ್ನೂ ಮತ್ತೆ ಕಜ್ಜಾಯಾನೂ ಉಡುಗೊರೆ ಆಗಿ ಕೊಟ್ಟಿದ್ದ! 'ಕೆಲ್ಸ ಇತ್ತು ಅದಕ್ಕೆ ಕಜ್ಜಾಯ ತರೋಕ್ ಆಗಿಲ್ಲ' ಅಂತ ಯಾಕ್ ಹೇಳಿದ್ದ ಅಂತ ಆಗ ತಿಳೀತು.

ನಾವು ಬಯಸ್ದೇ, ಎದುರು ನೋಡ್ದೇ ಇದ್ ಘಳಿಗೇಲಿ ನಮಗಿಷ್ಟ ಆದದ್ದು ಏನೋ ಕಣ್ಮುಂದೆ ಬಂದ್ ಬಿಟ್ರೆ ಎಂತಾ ಆನಂದ ಅನ್ನೋದು ಅರ್ಥ ಆಯ್ತು. ಅತೀ ಪ್ರೀತಿಯ ಸಿಹಿ ತಿಂಡಿ ಹುಟ್ಟು ಹಬ್ಬದ್ ಉಡುಗೊರೆಯಾಗ್ ದೊರ್ಕಿತ್ತು. ಅವ್ನ್ ಎಲ್ಲಿನವ್ನೋ, ನಾನ್ ಎಲ್ಲಿನವ್ನೋ.. ಜೊತೆಗಿದ್ ಸ್ವಲ್ಪ ಸಮಯದಲ್ಲೇ ನನ್ ಇಷ್ಟಗಳನ್ನ ಅರಿತ್ಕೊಂಡು ನಂಗ್ ಸರ್ಪ್ರೈಸ್ ಕೊಟ್ಟು ಅವ್ನು ಕಣ್ ತುಂಬೋ ಹಾಗ್ ಮಾಡಿದ್ದ. ಸ್ನೇಹ ಅಂದ್ರೆ ಇದೇ ಅಲ್ವಾ? ಅದೇ ಖುಷಿಲಿ ಅಲೆಯುಲಿ (mobile) ಎತ್ಕೊಂಡೆ. ಕಣ್ ತುಂಬ್ಕೊಂಡಿದ್ರಿಂದ ಅಲೆಯುಲಿ ಪರದೆ ಮಂಜ್ ಮಂಜಾಗ್ ಕಾಣಿಸ್ತಾ ಇತ್ತು. ಒಂದ್ ಕೈಯಲ್ಲಿ ಕಣ್ ಒರೆಸ್ತಾ ಇನ್ನೊಂದ್ ಕೈಯಲ್ಲಿ ಅಲೆಯುಲಿ ಹಿಡ್ಕೊಂಡು "ಥ್ಯಾಂಕ್ಸ್ ಮಗಾ" ಅಂತ ಅವ್ನಿಗೆ ಒಸಗೆ ಕಳುಹಿಸ್ದೆ. ಮುಖದಲ್ಲಿ ಎಲ್ಲಿಲ್ಲದ್ ಮುಗುಳ್ನಗು ಮಿಂಚ್ತಾ ಇತ್ತು. ಕಣ್ಣಲ್ಲಿ ಆನಂದ ಬಾಷ್ಪ ಜಿನುಗ್ತಾ ಇತ್ತು!

Thursday 10 August 2017

ಕುಣಿದು ಕುಣಿದು ಬಾರೆ..!


"ಅಳುವೊಂದು ಬೇಕು ನನಗೆ
ಅರೆಘಳಿಗೆ ಹೋಗು ಹೊರಗೆ
ಇಷ್ಟೊಳ್ಳೆ ಸ್ನೇಹಿತನಾಗಿ
ಕಾಡಿದರೆ ಹೇಗೆ?

ಮುಗುಳುನಗೆಯೆ ನೀ ಹೇಳು
ಯಾರಿರದ ವೇಳೆಯಲ್ಲಿ ನೀನೇಕೆ
ಜೊತೆಗಿರುವೆ?"

'ಮುಗುಳುನಗೆ' ಸಿನಿಮಾದ ಟೈಟಲ್ ಹಾಡು ಅದ್ರಲ್ಲೂ ಈ ಪ್ಯಾರ ಎಡೆಬಿಡದೆ ನನ್ನ ಕಾಡ್ತಾ ಇತ್ತು. ಆಫೀಸಿಂದ ಮನೆಗ್ ಬಂದವನೇ ಮತ್ತೊಮ್ಮೆ ಕೇಳೋಣ ಎಂದೆಣಿಸಿ ಯೂಟ್ಯೂಬ್ ‍ಅಲ್ಲಿ ಹಾಡನ್ನ ಹುಡುಕಿ ಮತ್ತೆ ಮತ್ತೆ ಕೇಳತೊಡಗ್ದೆ. ಈಗ ಹಾಡುಗಳನ್ನ ಕೇಳ್ಬೇಕು ಅಂದ್ ಕೂಡ್ಲೇ, ಕೇಳೋಕೆ ಎಷ್ಟೊಂದು ಪ್ಲಾಟ್ ಫಾರ್ಮ್ ಗಳಿವೆ. ವಿಂಕ್, ಗಾನ, ಸಾವನ್, ಯೂಟ್ಯೂಬ್ ಇತ್ಯಾದಿ ಇತ್ಯಾದಿ. ಇಂಟರ್ನೆಟ್ ಮತ್ತೆ ಮೊಬೈಲಲ್ಲಿ ಚಾರ್ಜ್ ಒಂದಿದ್ರೆ ನಮಗ್ ಬೇಕಾದ್ ಹಾಡನ್ನ, ಬೇಕಾದ್ ಕಡೆ ಕೂತ್ಕೊಂಡು, ಬೇಕಾದಷ್ಟು ಬಾರಿ ಕೇಳ್ತಾ ಇರಬಹುದಲ್ವಾ ಅನ್ನೋ ಯೋಚನೆ ಬಂದಾಗ; ಜೇಡ ಕಟ್ಟಿರೊ ಮೂಲೆ ಕಾಣಿಸ್ತು. ಟೈಮು ಹತ್ತು ವರ್ಷ ಹಿಂದಕ್ಕೆ, ಫ್ಲ್ಯಾಶ್ ಬ್ಯಾಕ್ ಗೆ ಹೋಯ್ತು.

ನಾನಾಗ ಹತ್ತನೇ ಕ್ಲಾಸಲ್ ಇದ್ದೆ. 'ಮುಂಗಾರು ಮಳೆ' ಸಿನಿಮಾದ್ ಸಮಯ. 'ಅನಿಸುತಿದೆ ಯಾಕೋ ಇಂದು',  'ಕುಣಿದು ಕುಣಿದು ಬಾರೆ' ಹಾಡ್ಗಳು ಚಿಕ್ ಮಕ್ಳಿಂದ ಹಿಡ್ದು ಮನೆ ಮಂದಿಗೆಲ್ಲ ಚಿರಪರಿಚಿತವಾಗಿ ಎಲ್ರೂ ಗುನುಗೋ ಹಾಗ್ ಆಗಿತ್ತು. ಆಗ ಇದ್ದಿದ್ ಒಂದೇ ಒಂದ್ ಮ್ಯೂಸಿಕ್ ಚಾನೆಲ್ ಅಂದ್ರೆ 'ಉದಯ ಮ್ಯೂಸಿಕ್'. ಹೆಚ್ಚಿನ ಜನ ಕರೆಮಾಡುಗರು ಕರೆ ಮಾಡಿ ಮುಂಗಾರು ಮಳೆಯ ಹಾಡನ್ನೇ ಪ್ರಸಾರ ಮಾಡೋಕೆ ಕೋರಿಕೆ ಇಡ್ತಾ ಇದ್ರು. ‌ಆ ತರ ಕರೆ ಮಾಡಿನೋ, ಇಲ್ಲ ಎಸ್.ಎಮ್.ಎಸ್ ಕಳ್ಸಿಯೋ ಕೋರಿಕೆ ಇಡೋಕೆ ನಮ್ಮನೇನಲ್ಲಿ ಅಲೆಯುಲಿ (ಮೊಬೈಲ್) ಇರ್ಲಿಲ್ಲ. ಯಾರಾದ್ರೂ ಕರೆ ಮಾಡಿ ಮುಂಗಾರು ಮಳೆ ಹಾಡನ್ನ ಹಾಕೋಕ್ ಹೇಳಲಿ ಅಥವಾ ಚಾನೆಲ್ ಅವ್ರೆ ದೊಡ್ ಮನ್ಸ್ ಮಾಡಿ ಆ ಹಾಡ್ಗಳನ್ನ ಹಾಕ್ಲಿ ಅಂತ ಕಾಯ್ತಾ ಇರ್ತಿದ್ದೆ.

ಇದೇ ಸಮಯಕ್ಕೆ ನನ್ ಗೆಳೆಯ ಚೇತನ್ ಅಲೆಯುಲಿ ತೆಗೊಂಡ. ಆಗಿನ್ ಕಾಲದ್ ಜನಪ್ರಿಯ ಹ್ಯಾಂಡ್ಸೆಟ್ಟು, ನೋಕಿಯಾ ೧೧೧೦! ಆ ಪುಣ್ಯಾತ್ಮ ಒಂದ್ ಒಳ್ಳೆ ಕೆಲ್ಸ ಮಾಡಿದ್ದ. ಅದೇನ್ ಅಂದ್ರೆ 'ಕುಣಿದು ಕುಣಿದು ಬಾರೆ' ಹಾಡನ್ನ ಅವ್ನ್ ಕಾಲರ್ ಟ್ಯೂನ್ ಆಗ್ ಮಾಡ್ಕೊಂಡಿದ್ದ. ನಂಗ್ ಎಲ್ಲಿಲ್ಲದ್ ಖುಷಿ. ಅವ್ನಿಗ್ ಕರೆ ಮಾಡಿದ್ರೆ, ಪೂರ್ತಿ ಅಲ್ದೇ ಇದ್ರೂ, ಹಾಡಿನ್ ಪಲ್ಲವಿ ಆದ್ರೂ ಬೇಕಾದಾಗ್ ಕೇಳ್ಬೋದು ಅಂತ! ನಾನ್ ಆಗ ದಿನ ಸಂಜೆ ನಮ್ಮ ಅಂಗಡಿಯಲ್ ಇರ್ತಿದ್ದೆ. ಅದಕ್ಕೆ ಚೇತನನ್ ಅಲೆಯುಲಿಯಲ್ಲಿ ನಮ್ಮಂಗಡಿಯ ಗೆಂಟುಲಿ (ಟೆಲೆಫೋನ್) ಅಂಕೆಯನ್ನ ಉಳ್ಸಿ,

"ನಂಗ್ ಹಾಡ್ ಕೇಣಕ್ ಅನ್ಸ್ದಲ್ ಅಂಗಡಿಯಿಂದ ಕರೆ ಮಾಡ್ತೆ. ಕರೆ ಎತ್ಬೇಡ. ಎತ್ರೆ ಬೋಳ್ ಮೇಲ್ ತಟ್ಟತೆ" ಅಂತ ಅಂಗಡಿಯಿಂದ ನಾ ಕರೆ ಮಾಡಿದ್ರೆ ಎತ್ತುವ ಹಾಗಿಲ್ಲ ಅಂತ ಒಪ್ಪಂದ ಮಾಡ್ಕೊಂಡೆ. ನಂಗೆ ಹಾಡ್ ಕೇಳ್ಬೇಕು ಅನ್ಸಿದಾಗೆಲ್ಲ ಅವ್ನಿಗ್ ಕರೆ ಮಾಡಿ ಹಾಡ್ ಕೇಳೋಕ್ ಶುರು ಮಾಡ್ದೆ. ಎನೋ ದೊಡ್ ಪ್ಲ್ಯಾನ್ ಮಾಡಿದ್ ಸಾರ್ಥಕತೆ ನಂಗೆ! ಇದ್ ಹೀಗೆ ಮುಂದುವರ್ದಿತ್ತು. ಅವ್ನೂ ಪಾಪ ಒಪ್ಪಂದದ್ ಪ್ರಕಾರ ಯಾವತ್ ಕರೆ ಮಾಡಿದ್ರೂ ಎತ್ತತಾ ಇರ್ಲಿಲ್ಲ.

ಹೀಗೆ ಒಂದ್ ದಿನ ನಾ ಅಂಗಡಿಯಲ್ ಇದ್ದಾಗ ಅರ್ಜೆಂಟ್ ಆಗಿ ಅವ್ನ್ ಹತ್ರ ಮಾತಾಡ್ಬೇಕಿತ್ತು. ಕರೆ ಮಾಡ್ದೆ. ಅವ್ನು ನಾ ಹಾಡ್ ಕೇಳೋಕ್ ಕರೆ ಮಾಡಿದಿನಿ ಅಂತ ನಾ ಹತ್ತಾರು ಬಾರಿ ಕರೆ ಮಾಡಿದ್ರೂ ಜಪ್ಪಯ್ಯ ಅಂದ್ರೂ ಎತ್ಲಿಲ್ಲ! ನಂಗೆ ಈ 'ಕುಣಿದು ಕುಣಿದು ಬಾರೆ' ಮತ್ತೆ ಹಾಡ್ ಕೇಳೊಕೆ ಮಾಡಿದ್ ಏರ್ಪಾಡಿನ ಬಗ್ಗೆ ಬೇಜಾರ್ ಆಗೋಕ್ ಶುರು ಆಯ್ತು. ಮತ್ತೆ ಮತ್ತೆ ಕರೆ ಮಾಡ್ದೆ. ಅವ್ನು ಭಾರೀ ನಿಷ್ಠಾವಂತ! ಇದನ್ನ ಅಗ್ನಿಪರೀಕ್ಷೆ ಅಂದ್ಕೊಂಡ್ನೋ ಏನೊ! ಕರೆ ಎತ್ಲೇ ಇಲ್ಲ. ಏನ್ ಮಾಡೋದು ಅಂತ ಗೊತ್ತಾಗ್ದೆ ನಾನು ಪಕ್ಕದ್ ಅಂಗ್ಡಿಗ್ ಹೋಗಿ ಅಲ್ಲಿಂದ ಅವ್ನಿಗೆ ಕರೆ ಮಾಡ್ದೆ. ಮೊದಲ್ನೇ ರಿಂಗಿಗೆ ರಪ್ ಅಂತ ಎತ್ತಿದ! 'ಅಯ್ಯೋ ಪುಣ್ಯಾತ್ಮ' ಅಂತ ಹೇಳಿ, ನಕ್ಕು ಮಾತಾಡೋಕ್ ಇದ್ದಿದ್ ವಿಷ್ಯ ಮಾತಾಡಿ ಮುಗ್ಸಿದೆ!

ಈಗ, ಕೇಳ್ಬೇಕು ಅನ್ಸಿದ್ ಹಾಡ್ಗಳು ಬೆರಳ್ ತುದಿಯಲ್ಲೇ ಸಿಗೋವಾಗ, ಆ ಕಾಲ್ದಲ್ಲಿ ಕ್ಯಾಸೆಟ್ ಬಾಡಿಗೆಗ್ ತಂದು ವಾಕ್ ಮ್ಯಾನ್ ಅಲ್ಲಿ ಹಾಡ್ ಕೇಳ್ತಾ ಇದ್ದಿದ್ದು, ಸೈಬರ್ ಸೆಂಟರ್ಗ್ ಹೋಗಿ ಬೇಕಾಗಿದ್ ಹಾಡ್ಗಳನ್ನ ಪಟ್ಟಿ ಮಾಡಿ ಸಿ.ಡಿ ಯಲ್ಲಿ ಬರ್ನ್ ಮಾಡ್ಸಿ ತರ್ತಾ ಇದ್ದಿದ್ದು, ಈ ಕಾಲರ್ ಟ್ಯೂನ್ ಇದ್ದವ್ರಿಗ್ ಕರೆ ಮಾಡಿ ಸರ್ಕಸ್ ಮಾಡ್ತಾ ಇದ್ದಿದ್ದು.. ಎಲ್ಲ ನೆನ್ಪಿನ್ ಪರದೆ ಮೇಲ್ ಬಂದು, ನಮಗ್ ಗೊತ್ತಿಲ್ದೇ, ಒಂದು ಕಿರುನಗೆಯನ್ನ ಪ್ರತ್ಯಕ್ಷ ಆಗೋ ಹಾಗ್ ಮಾಡತ್ತೆ. ಅಲ್ವಾ? ಅದಕ್ಕೆ ಹೇಳೋದ್ ಅನ್ಸತ್ತೆ:

"What is hard to endure
Is sweet to remember" ಅಂತ :)

Monday 20 February 2017

ಸುಖ



ಗಾಂಧಿ ಬಜಾರಿನ ಅಂಗಡಿಗಳ ಮುಂದೆ ಬೇಡುತ್ತಿದ್ದ ಭಿಕ್ಷುಕನಿಗೆ ಚಳಿಯಲ್ಲಿ ನಡುಗುತ್ತಿದ್ದಾಗ ಹೊದ್ದುಕೊಳ್ಳಲು ಬಟ್ಟೆ ಇರಲಿಲ್ಲ.

ಇಂದು ಮುಂಜಾನೆ ಅವನು ತೀರಿಕೊಂಡ.

ಪಾಲಿಕೆಯವರು ಬಿಳಿ ಬಟ್ಟೆ ಹೊದಿಸಿ ಕರೆದೊಯ್ದರು.

ಸಾವಲ್ಲೆ ಸುಖವಿದೆ ಎಂದು, ಎಂದೂ ಕಣ್ತೆರೆಯದೆ ಬೆಚ್ಚನೆ ಮಲಗಿದ!

ನಗು ಮುಖ


ಬಂಧು ಬಾಂಧವ್ಯಗಳನ್ನೆಲ್ಲಾ ಬದಿಗಿರಿಸಿ, "ದುಡ್ಡೇ ದೊಡ್ಡಪ್ಪ" ಎಂದು ನೋಟಿನ ಕಂತೆಗಳ ಕಲೆಹಾಕುತ್ತಾ ಬಂದೆ.

ಅರಿವಿಲ್ಲದೆ ಎಲ್ಲರೂ ನನ್ನಿಂದ ದೂರಾದರು. ಇಂದು ನನ್ನ ಬಳಿ ಇರುವುದು ಒಂದೇ ಒಂದು ನಗು ಮುಖ.

ಅಪ್ಪ ಅಮ್ಮನದ್ದಲ್ಲ, ಹೆಂಡತಿ ಮಕ್ಕಳದ್ದಲ್ಲ, ಕಡೆಗೆ ನನ್ನದೂ ಅಲ್ಲ!

ನೋಟಿನ ಮೇಲಿರುವ ಗಾಂಧಿ ತಾತನದ್ದು!

ಕಣ್ಣಲಿ


ಲೇಖನಿಯಿಂದ ಇಳಿಯದ
ಪುಟಗಳ ಮೇಲೆ ಹರಿಯದ
ಹಾಡಾಗಿ ತೇಲದ
ನೂರಾರು ಕವಿತೆ ಬೆಚ್ಚನೆ
ಹುದುಗಿದೆ ನಿನ್ನ ಕಣ್ಣಲಿ!

ಪುಟ್ಟ ದೀಪ

ಹಚ್ಚ ಹೊರಟೆ ಪುಟ್ಟ ದೀಪವೊಂದ
ಕತ್ತಲ ಗೆಲ್ಲುವ ಭರಾಟೆಯಲಿ

ದೀಪ ಬೆಳಗಲೇ ಇಲ್ಲ! ಕಾರಣ;
ಎಣ್ಣೆಯ ಬದಲು ನೀರ ಹಾಕಿದ್ದೆ ಅವಸರದಲಿ

ಹೊಸ ಪ್ರೀತಿಯ ಬಂಡಿ

ತುಕ್ಕು ಹಿಡಿದ ತುಕಾಲಿ
ನೆನಪುಗಳ ಹಳಿಯ ಮೇಲೆ
ಎಷ್ಟು ದೂರ ಸಾಗೀತು
ಹೊಸ ಪ್ರೀತಿಯ ಬಂಡಿ?

ಲಾಗ್ ಇನ್- ಲಾಗ್ ಔಟ್

Credits - Google

"ನಾನ್ ಆಫೀಸಿಂದ ಹೊರಡ್ ಬೇಕಾದ್ರೆನೆ ಶುರುವಾಗ್ ಬೇಕಿತ್ತಾ ಈ ಮಳೆ? ಮನೆ ತಲುಪಿದ್ ಮೇಲ್ ಬಂದಿದ್ರೆ ಏನ್ ಆಗ್ತಿತ್ತು?" ಆತ ಗೊಣಗತೊಡಗಿದ.

ಇನ್ನು ಮುಂದೆ ಎಲ್ಲರ ಲಾಗ್ ಇನ್- ಲಾಗ್ ಔಟ್ ವೇಳೆ ನೋಡಿಕೊಂಡು ಕೆಲಸ ಮಾಡಬೇಕಾಯಿತಲ್ಲ ಎಂದು ವರುಣ ದೇವ ನಗತೊಡಗಿದ.

ಶ್ರೀಕೃಷ್ಣ

Credits : Google


ಹುಟ್ಟುವ ಮಗು ತನ್ನಂತೆ ಬೆಳ್ಳಗಿರಲಿ, ಗಂಡನಂತೆ ಕಪ್ಪಗಿರುವುದು ಬೇಡ ಎಂದು ಮನೆ ದೇವರಾದ ಉಡುಪಿ ಶ್ರೀಕೃಷ್ಣನಲ್ಲಿ ಹರಕೆ ಹೊತ್ತಳು.

ಚಕಿತಗೊಂಡ ಶ್ರೀಕೃಷ್ಣ ಪರಮಾತ್ಮ ನಸುನಕ್ಕು ತನ್ನ ಮೈಬಣ್ಣವ ಒಮ್ಮೆ ನೋಡಿಕೊಂಡ!

Wednesday 11 January 2017

ಹಿಮಾಲಯ ಕೈ ಬೀಸಿ ಕರೆದಾಗ...

          ೨೦೧೨ರಲ್ಲಿ ಗೆಳೆಯ ನೇಪಾಳಕ್ಕೆ ಹೋಗುವಾಗ ಬಾನೋಡ (ವಿಮಾನ)ದಲ್ಲಿ ಕೂತು ಹಿಮಾಲಯದ ಚಿತ್ರ ತೆಗೆದಿದ್ದ. ಆ ಅಂದವನ್ನು ನೋಡಿ ನಿಬ್ಬೆರಗಾಗಿ, ಮುಂದೆ ಒಮ್ಮೆಯಾದರೂ ಹಿಮಾಲಯವನ್ನು ನೋಡಲೇಬೇಕೆಂಬ ಹೆಬ್ಬಯಕೆಯೊಂದನ್ನು ಮನದ ತಿಜೋರಿಯಲ್ಲಿ ಗುಪ್ತವಾಗಿ ಬಚ್ಚಿಟ್ಟಿದ್ದೆ.

          ೨೦೧೬ ಅಕ್ಟೋಬರ್ ವೇಳೆಯಲ್ಲಿ ಗೆಳೆಯರು, ಡಿಸೆಂಬರ್ ಕೊನೆಯಲ್ಲಿ ಹಿಮಾಲಯಕ್ಕೆ ಚಾರಣಕ್ಕೆ ಹೋಗೋಣ ಎಂದಾಗ ಮರುಯೋಚನೆ ಮಾಡದೆ ಖಡಾಖಂಡಿತವಾಗಿ ಇಲ್ಲವೆಂದಿದ್ದೆ. ರಜೆ ಕೇಳಿದರೆ ಕಿಡ್ನಿ ಕೇಳಿದ ಹಾಗೆ ಮುಖ ಮಾಡುವ ಮ್ಯಾನೇಜರ್; ಬ್ಯಾಂಕ್ ಖಾತೆಯಲ್ಲಿದ್ದ ಅತ್ಯಲ್ಪ ಮೊತ್ತ, ಇವುಗಳು ನೆನಪಿಗೆ ಬಂದದ್ದೇ ಆ ನಿರಾಕರಣೆಗೆ ಮುಖ್ಯ ಕಾರಣವಾಗಿತ್ತು!

          ನನ್ನ ಮಾತಿಗೆ ತಲೆಕೆಡಿಸಿಕೊಳ್ಳದೆ, ನನ್ನನ್ನೂ ಲೆಕ್ಕಕ್ಕೆ ಹಿಡಿದು; ಗೆಳೆಯರು ಅವರ ಪಾಡಿಗೆ ಯೋಜನೆ ಮಾಡಲು ಶುರು ಮಾಡಿದರು. ಟ್ರೆಕ್ ದ ಹಿಮಾಲಯಾಸ್ (ಟಿ.ಟಿ.ಎಚ್) ಸಂಸ್ಥೆಯ ಜೊತೆ "ಚೋಪ್ತಾ-ಚಂದ್ರಶಿಲಾ" ಬೆಟ್ಟ (೧೩,೧೦೦ ಅಡಿ ಎತ್ತರ)ವ ಚಾರಣ ಮಾಡೋಣ ಎಂದರು. ಹೇಗೂ ಹೋಗುವುದಿಲ್ಲ ಎಂದು ನಿರ್ಧರಿಸಿದ್ದರಿಂದ ನಾನೂ ಯಾವುದಕ್ಕೂ ತಲೆ ಕೆಡಿಸಿಕೊಳ್ಳಲಿಲ್ಲ. ಮ್ಯಾಂಡೇಟರಿ ಅನ್ನೋ ಹಾಗೆ ವಾಟ್ಸಾಪ್ನಲ್ಲಿ  ಗುಂಪು ಕೂಡಾ ರಚನೆ ಆಯ್ತು! ಅಲ್ಲಿ ಯಾವ ದಿನ ಹೋಗುವುದು, ಯಾವ ಬ್ಯಾಚಲ್ಲಿ ಜಾಗವಿದೆ, ಯಾವಾಗ ಹೋದರೆ ಬಾನೋಡದಲ್ಲಿ ಕಡಿಮೆ ವೆಚ್ಚದಲ್ಲಿ ಹೋಗಬಹುದು ಇತ್ಯಾದಿ ವಿವರಗಳನ್ನು ಚರ್ಚಿಸಿ, ಬುಕ್ ಮಾಡಿಯೇ ಬಿಟ್ಟರು! ದಿನಾಂಕ ತಿಳಿಸಿ ನನಗೆ ರಜೆ ಹಾಕಲು ಸೂಚಿಸಿದರು. ನಾನು ರಜೆ ಕೇಳಲೇ ಬೇಕಾಯ್ತು! ಲಂಡನಲ್ಲಿದ್ದ ಮ್ಯಾನೇಜರ್ಗೆ ಮಿಂಚೆಯಲ್ಲಿ ರಜೆಗಾಗಿ ಕೋರಿದೆ, ೪ನೇ ಈಯತ್ತಿನಲ್ಲಿದ್ದಾಗ ಕ್ಲಾಸ್ ಟೀಚರ್ಗೆ ರಜೆ ಅರ್ಜಿ ಕೊಡುತ್ತಿದ್ದ ಹಾಗೆ! ಗೆಳೆಯರು ಚಂದ್ರಶಿಲಾ ಶಿಖರದ ಚಿತ್ರಗಳನ್ನು ಕಳುಹಿಸ್ತಾ ಇದ್ದರು. ಚಿತ್ರಗಳನ್ನು ನೋಡಿದರೆ ಅಲ್ಲಿ ಹೋದ ಮೇಲೆ ಸರ್ಪ್ರೈಸ್ ಇರುವುದಿಲ್ಲ ಎಂದು ನೋಡುವುದರಿಂದ ಹಿಂದೆ ಸರಿದಿದ್ದೆ. ಅತ್ತ ಟಿ.ಟಿ.ಎಚ್ ಅವರು ಚಾರಣಕ್ಕೆ ಯಾವ ರೀತಿ ಸಿದ್ಧತೆ ನಡೆಸಬೇಕು, ಏನೇನನ್ನು ತರಬೇಕು ಎಂಬಿತ್ಯಾದಿ ಮಾಹಿತಿ ಇರುವ ಮಿಂಚೆಯನ್ನು  ಒಂದರ ಹಿಂದೆ ಒಂದನ್ನು ಕಳುಹಿಸುತ್ತಿದ್ದರು. ಇತ್ತ ಪುಣ್ಯಾತ್ಮ ನಮ್ಮ ಮ್ಯಾನೇಜರ್ ರಜೆಗೆ ಒಪ್ಪಿಗೆ ಸೂಚಿಸಿದ . ಅಲ್ಲಿಗೆ ನಾನು ಚಾರಣಕ್ಕೆ  ಹೋಗುವುದು ಖಾತ್ರಿಯಾಗಿತ್ತು. ಹಣದ ಸಮಸ್ಯೆಗೆ ಗೆಳೆಯರು ಅಭಯಹಸ್ತ ಸೂಚಿಸಿದ್ದರು!

          ಚಾರಣಕ್ಕೆ ಬೇಕಾಗುವ ಸಾಮಗ್ರಿಗಳನ್ನ ಹಿಂದಿನ ಬಾರಿ ಚಾರಣಕ್ಕೆ ಹೋದ ಗೆಳೆಯರಿಂದ, ಡೆಕತ್ಲಾನಿಂದ ತಂದು, ಹೇಗೆ ಪ್ಯಾಕ್ ಮಾಡಬೇಕು ಎಂಬ ವೀಡಿಯೋ ನೋಡಿ, ಎಲ್ಲಾ ಸಾಮಗ್ರಿ, ಬಟ್ಟೆ ಬರೆಗಳನ್ನ ಚೀಲಕ್ಕೆ ತುರುಕಿಸಿದ್ದು ಆಯ್ತು. ೨೨ನೇ ತಾರೀಕು ಬಾನೋಡದಲ್ಲಿ ಹೊರಡುವವರಿದ್ದೆವು. 


ನಾನು, ಸಂಕೇತ್, ಪರೀಕ್ಷಿತ್ ಮತ್ತು ಸುಖೇಶ್ 

          ನಾನು, ಗೆಳೆಯರಾದ ಸುಖೇಶ್, ಸಂಕೇತ್ ಮತ್ತು ಪರೀಕ್ಷಿತ್ ಬಾನೋಡದಲ್ಲಿ ಕೂತು ದೆಹಲಿ ತಲುಪಿ, ಮರುದಿನ  ಹೃಶಿಕೇಷಕ್ಕೆ ತಲುಪಿದೆವು. ಅಲ್ಲಿ ಒಂದು ದಿನ ಯೂತ್ ಹಾಸ್ಟೇಲ್ನಲ್ಲಿ ತಂಗಿ, ಹೃಶಿಕೇಷ ಸುತ್ತಿ, ೨೫ನೇ ತಾರೀಕು ಬೆಳಿಗ್ಗೆ ಟಿ.ಟಿ.ಎಚ್ ಅವರ ಗಾಡಿಯಲ್ಲಿ ಉಳಿದ ೧೪ ಚಾರಣಿಗರ ಪರಿಚಯ ಮಾಡಿಕೊಂಡು ಸಂಜೆ ೭ರ ಸುಮಾರಿಗೆ ಚಾರಣದ ಬೇಸ್ ಕ್ಯಾಂಪ್ 'ಸಾರಿ' ಯನ್ನು ತಲುಪಿದೆವು. ಮಧ್ಯಾಹ್ನ ಊಟಕ್ಕೆ ನಿಲ್ಲಿಸಿದಾಗ ಮಳೆರಾಯ ಸಿಕ್ಕಿದ್ದರಿಂದ, ಚಂದ್ರಶಿಲಾದಲ್ಲಿ ಹಿಮ ಬಿದ್ದರಬಹುದೆಂದು ಊಹಿಸಿದರು. ಗೂಗಲ್ನಲ್ಲಿ ಇನ್ನು ಒಂದು ವಾರ ಹಿಮ ಬೀಳದು ಎಂದು ಓದಿದ ನಾವು ಎಲ್ಲಿಲ್ಲದ ಖುಷಿಯಲ್ಲಿ ಕುಣಿದಾಡುತ್ತಿದ್ದಾಗ ನೆನಪಾದದ್ದು ಗಾಡಿ ಮೇಲಿದ್ದ ಮಳೆಯಲ್ಲಿ ನೆನೆಯುತ್ತಿದ್ದ ನಮ್ಮ ಬ್ಯಾಗುಗಳು! ಓಡಿ ಹೋಗಿ ಬ್ಯಾಗುಗಳನ್ನು ಗಾಡಿ ಒಳಗೆ ಇಟ್ಟೆವು. ದಾರಿಯಲ್ಲಿ ಸಿಕ್ಕ ಒಂದೆರಡು ಸುಂದರ ತಾಣಗಳಲ್ಲಿ ನಿಲ್ಲಿಸಿ ತನ್ನಿ (ಸೆಲ್ಫಿ) ತೆಗೆದುಕೊಂಡೆವು. 


ರುದ್ರಪ್ರಯಾಗ

         ಸಾರಿ ಗೆ ತಲುಪಿದಾಗ ಚಳಿ ವಿಪರೀತವಾಗಿತ್ತು. ಊಟ ಮಾಡುವಾಗ ಚಳಿಗೆ ಚಪಾತಿ ಕತ್ತರಿಸಲಾಗದಷ್ಟು ಕೈ ಮಂಜುಗಟ್ಟಿತ್ತು! ಬೇಸ್ ಕ್ಯಾಂಪ್ ಅಲ್ಲೇ ಹೀಗಿದ್ದರೆ ಬೆಟ್ಟದ ತುದಿಯಲ್ಲಿ ಚಳಿ ಹೇಗಿರಬಹುದು ಎಂಬ ಯೋಚನೆಯೇ ಚಳಿಯನ್ನು ಇಮ್ಮಡಿಗೊಳಿಸಿತು. ಊಟ ರುಚಿ ರುಚಿಯಾಗಿದ್ದರಿಂದ ಬ್ಯಾಟಿಂಗ್ ಭರ್ಜರಿಯಾಗೇ ನಡೆಯಿತು. ಊಟ ಮುಗಿಯುತ್ತಿದ್ದ ಹಾಗೆಯೆ ಚಾರಣದ ಲೀಡ್ ರವಿ ಮತ್ತು ಆಪರೇಶನಲ್ ಹೆಡ್ ಗೋಪಾಲ್ ಒಟ್ಟು ಚಾರಣದ ಬಗ್ಗೆ, ಮರುದಿನ ನಾವು ಎಷ್ಟು ಕಿ.ಮೀ ನಡೆಯಬೇಕೆಂಬ ವಿವರಗಳನ್ನ ನೀಡಲಾರಂಭಿಸಿದರು. ಆ ವಾತಾವರಣಕ್ಕೆ ಮೈ ಹೊಂದಿಕೊಳ್ಳಲಿ ಎಂದು ನಾನು ಜಾಕೇಟ್ ಹಾಕಿಕೊಳ್ಳದೆ ಬರೀ ಒಂದು ಸ್ವೆಟರ್ ಧರಿಸಿದ್ದೆ. ಅದನ್ನು ನೋಡಿ ಗೋಪಾಲ್, "ಜಾಕೇಟ್ ಎಲ್ಲಿ?" ಎಂದು ಕೇಳಿದ. "ಜಾಕೇಟ್ ರೂಮಲ್ಲಿದೆ.. ಹೀಗೆ ಆರಾಮಾಗಿದೆ!" ಎಂದೆ. ಈ ಸನ್ನಿವೇಶ ನನಗೆ 'ಜಾಕೇಟ್ ಮ್ಯಾನ್' ಎಂಬ ಹೊಸ ಬಿರುದು ತಂದು ಕೊಟ್ಟಿತು! ಬೆಳಿಗ್ಗೆ ೭ಕ್ಕೆ ಚಹಾ, ೮ಕ್ಕೆ ತಿಂಡಿ ಹಾಗೂ ೯ಕ್ಕೆ ಹೊರಡುವುದು ಎಂದು ಹೇಳಿದರು. ಚಳಿಯ ನಡುಕದಿಂದ ಹೊರಬರಲು ಕ್ಯಾಂಪ್ ಫೈರ್ ಮುಂದೆ ಕೂತು ಚಳಿ ಕಾಯಿಸಿ, ಚಹಾ ಹೀರಿ ಕೋಣೆಗೆ ಹೋಗಿ ದಪ್ಪನೆಯ ರಗ್ಗಿನ ಕೆಳಗೆ ಬೆಚ್ಚನೆ ಮಲಗಿದೆವು. ಮುಂದಿನ ೩-೪ ದಿನ ಟೆಂಟಲ್ಲಿ ಮಲಗಬೇಕೆಂಬ ಯೋಚನೆಯೇ ಹಾಸಿಗೆಯನ್ನು ಇನ್ನೂ ಮೆತ್ತಗೆ ಮಾಡಿದವು. 


ಸಾರಿ 

          ಮೊದಲನೇ ದಿನ ನಾವು ಬೇಸ್ ಕ್ಯಾಂಪ್ನಿಂದ ೩ ಕಿ.ಮೀ ಚಾರಣ ಮಾಡಿ ದೇವರಿಯಾತಾಲ್ ಕ್ಯಾಂಪನ್ನು ತಲುಪಬೇಕಿತ್ತು. ಬೆಳಿಗ್ಗೆ ಗೆಳೆಯ ಪರೀಕ್ಷಿತ್ ನಮ್ಮನ್ನು ಎಬ್ಬಿಸಿದ. ಮುಖ ತೊಳೆಯಲು ನೀರಿಗೆ ಕೈ ಇಟ್ಟರೆ ತಂಪೆಟ್ಟಿಗೆಯಿಂದ ಹೊರ ತೆಗೆದ ನೀರನ್ನು ಮುಟ್ಟಿದಂತಾದಾಗ "ಮುಂದಿನ ನಾಲ್ಕು ದಿನ ಕಷ್ಟ ಇದೆ ಗುರು" ಎಂದು ಮನಸ್ಸು ಪಿಸುಗುಟ್ಟಿತು. ತಿಂಡಿ ತಿನ್ನಲು ಹೋದರೆ ಅಲ್ಲಿ ಬ್ರೆಡ್ ಜಾಮ್ ಮತ್ತು ಬ್ರೆಡ್ ಆಮ್ಲೇಟ್ ಇಟ್ಟಿದ್ರು. ದೋಸೆ, ಇಡ್ಲಿ, ಬೇಳೆ ಬಾತ್ ತಿಂದು ಬೆಳೆದ ಜೀವ "ಅಯ್ಯೋ ಶಿವನೆ! ಈ ಒಣಕಲು ಬ್ರೆಡ್ಡಿಗೆ ಜಾಮ್ ಸವರಿ ತಿಂದು ನಾನು ಬೆಟ್ಟ ಹತ್ತೋದ್ ಹೌದಾ?" ಎಂದು ಪ್ರಶ್ನಿಸಿತು. ಬೇರೆ ಆಯ್ಕೆ ಇರಲಿಲ್ಲ. ದೋಸೆ ಜೊತೆ ಚಟ್ನಿ ತಿಂದ ಹಾಗೆ ಬ್ರೆಡ್ ಜೊತೆ ಜಾಮ್ ಹಾಕಿಕೊಂಡು ತಿಂದು ದಾರಿಯಲ್ಲಿ ಹಸಿವಾದರೆ ಎಂದು ಟಿ.ಟಿ.ಎಚ್ ಅವರು ಕೊಟ್ಟ ಬಿಸ್ಕತ್ತು, ಚಾಕಲೇಟುಗಳನ್ನು ಚೀಲದಲ್ಲಿ ತುಂಬಿ ಚಾರಣ ಶುರು ಮಾಡುವ ಜಾಗಕ್ಕೆ ಬಂದೆವು. "ಹೊರಡುವ ಮೊದಲು ಒಂದು ಚಿತ್ರ ಬೇಕಲ್ವ" ಎಂದು ಯಾರೋ ಹೇಳಿದ್ದರಿಂದ ಅಲ್ಲಿ ನಿಂತು ಸಶಸ್ತ್ರ ಸಮೇತರಾಗಿದ್ದ ಇಡೀ ಗುಂಪಿನ ಚಿತ್ರ ತೆಗೆದೆವು.

          ಆಶ್ಚರ್ಯಕರ ಸಂಗತಿಯೆಂದರೆ ಚಾರಣದ ಗುಂಪಿನ ೧೮ ಜನರಲ್ಲಿ ೧೦ ಜನ ಬೆಂಗಳೂರಿನವರೇ! ಉಳಿದ ೮ ಜನರಲ್ಲಿ ೪ ಜನ ಮುಂಬಯಿ ಹಾಗೂ ಇನ್ನು ೪ ಜನ ದೆಹಲಿಯವರು. ನಮ್ಮ ನಾಲ್ವರ ಗುಂಪಿಗೆ 'ಬೆಂಗಳೂರು ಬಾಯ್ಸ್' ಎಂಬ ನಾಮಕರಣವಾಯಿತು!

          ಚಳಿ ಇರುತ್ತೆ ಅಂತ ಸ್ವೆಟರು, ಜಾಕೆಟು ಹಾಕ್ಕೊಂಡಿದ್ವಿ, ಆದ್ರೆ, ಸಿಕ್ಕಾಪಟ್ಟೆ ಬಿಸಿಲು ಬಂದು ಬೆವ್ರು ಜಲಪಾತದ ತರಹ ಇಳಿಯೋಕೆ ಶುರು ಆಯ್ತು. ಹೋಗೋ ದಾರಿ ಬೇರೆ ಸಿಕ್ಕಾಪಟ್ಟೆ ಏರುಮಟ್ಟದಲ್ಲಿತ್ತು. ಇನ್ನು ಈ ಜಾಕೇಟ್, ಥರ್ಮಲ್ಸ್ ಹಾಕಿಕೊಂಡರೆ ಬೆವರಲ್ಲಿ ತೋಯ್ದು ಹೋಗುವುದು ನಿಶ್ಚಿತ ಎಂದು ಅವುಗಳನ್ನು ತೆಗೆದು ಚೀಲದಲ್ಲಿ ತುರುಕಿ ನಡಿಯೋಕೆ ಶುರು ಮಾಡಿದ್ವಿ. ಚೀಲದಲ್ಲಿ ಕಿವಿಯುಲಿ ಇದ್ದಿದ್ದು ನೆನಪಾಗಿ ಕಿರಿಕ್ ಪಾರ್ಟಿದು, ಎಸ್.ಪಿ.ಬಿ ಸರ್ ದು ಹಾಡುಗಳನ್ನು ಕೇಳ್ತಾ ಬೆಟ್ಟ ಹತ್ತತಾ ಇದ್ವಿ. ಚಾರಣದ ಗೈಡ್ ಯುಗಲ್ ನಮ್ಮೊಡನೆ ಬರುತ್ತಿದ್ದ. ದಾರೀಲಿ ಒಂದೆರ್ಡು ಒಳ್ಳೆಯ ವ್ಯೂ ಪಾಯಿಂಟ್ಗಳು ಇದ್ವು. ಬರೀ ೩ ಕಿ.ಮೀ ಚಾರಣ ಇದ್ದಿದ್ದರಿಂದ  ಊಟದ ಸಮಯಕ್ಕೆ ನಾವು ದೇವರಿಯಾತಲ್ ಕ್ಯಾಂಪನ್ನು ತಲುಪಿದೆವು. ಮಹಾಭಾರತದ 'ಯಕ್ಷ ಪ್ರಶ್ನೆ' ನಡೆದದ್ದು ಇದೇ ದೇವರಿಯಾತಾಲ್ ಕೆರೆಯ ಬಳಿ ಅಂತೆ! ಕೇಳಿ ಬೆರಗುಗೊಂಡೆವು. ಟೆಂಟ್ಗಳನ್ನ ಇನ್ನೂ ಹಾಕಿರದಿದ್ದರಿಂದ ಚೀಲಗಳನ್ನು ಪಕ್ಕದಲ್ಲಿಟ್ಟು ವಾಚ್ ಟವರ್, ಕೆರೆಯಲ್ಲಿ ಕಾಣುತ್ತಿದ್ದ ದೈತ್ಯ 'ಚೌಕಂಬ' ಪರ್ವತದ ಬಿಂಬ, ಎಲ್ಲಿಡೆ ಹರಡಿದ ಹಿಮವನ್ನು ನೋಡುತ್ತ ಕೂತು ಬಿಟ್ಟೆವು.


ದೈತ್ಯ ಚೌಕಂಬ

ದೈತ್ಯ ಚೌಕಂಬದ ಬಿಂಬ

          ಬಿಸಿ ಬಿಸಿ ಅನ್ನ, ಬೇಳೆ ಸಾರು, ನೆಂಚಿಕೊಳ್ಳಲು ಉಪ್ಪಿನಕಾಯಿ ಕಣ್ಣ ಮುಂದೆ ಬೃಹತ್ ಬೆಟ್ಟಗಳ ಸಾಲು! ಆಹಾ! ಎಂತಹ ರಮಣೀಯ ನೋಟ! ಆ ಅಂದ ಊಟದ ರುಚಿಯನ್ನು ಹೆಚ್ಚಿಸಿತ್ತು. ಊಟ ಮುಗಿಯುತ್ತಿದ್ದಂತೆ ಟಿ.ಟಿ.ಎಚ್ ಅವರು  ಟೆಂಟ್ ಹಾಕಲು ಶುರು ಮಾಡಿದರು. ಟೆಂಟ್ ಹಾಕಲು ಕಲಿತಂತಾಗುತ್ತದೆ ಎಂದು ನಾವೂ ಕೈ ಜೋಡಿಸಿ ಒಂದಿಷ್ಟು ಟೆಂಟ್ ಹಾಕಿದೆವು. ಸಂಜೆ ಅತ್ತಿತ್ತ ಅಲೆಯುತ್ತಿದ್ದಾಗ ಆಪರೇಶನಲ್ ಹೆಡ್ ಗೋಪಾಲ್ ಸಿಕ್ಕ. ಹಾಗೇ ಮಾತಾಡುತ್ತ ಪ್ರಪಂಚ ಎಷ್ಟು ಚಿಕ್ಕದು ಎಂಬುದು ಮತ್ತೊಮ್ಮೆ ಅರಿವಾಯಿತು! ಅವನಿಗೂ ನನಗೂ ಹಲವಾರು ಪರಸ್ಪರ ಗೆಳೆಯರಿದ್ದರು. ಅವನು ಮತ್ತು ನನ್ನ ಹಲವಾರು ಗೆಳೆಯರು ಮನಾಲಿಯಲ್ಲಿ 'ಬೇಸಿಕ್ ಮೌಂಟೇನಿರಿಂಗ್ ಕೋರ್ಸ್' ಅನ್ನು ಜೊತೆಗೆ ಮುಗಿಸಿದ್ದರು. ಅಷ್ಟು ತಿಳಿಯುತ್ತಿದ್ದಂತೆ ನನ್ನನ್ನು 'ಮಚ್ಚಾ' ಎಂದು ಕರೆಯಲಾರಂಭಿಸಿದ! ಸಂಜೆ ಬಿಸಿ ಬಿಸಿ ಸೂಪ್ ಕುಡಿದು, ರಾತಿ ಊಟ ಮಾಡಿ ಡಿನ್ನರ್ ಟೆಂಟ್ ಇಂದ ಹೊರಬಂದು ಆಗಸ ನೋಡಿ ದಂಗಾದೆ! ಬೆಂಗಳೂರಿನಲ್ಲಿ ಕಣ್ಮರೆಯಾಗಿದ್ದ ಎಲ್ಲಾ ಚುಕ್ಕಿ ತಾರೆಗಳು ಅಲ್ಲಿ ಪ್ರತ್ಯಕ್ಷವಾಗಿದ್ದವು. ನಾವು ಆಡುತ್ತಿದ್ದ ಮಾತುಗಳನ್ನು ಆ ತಾರೆಗಳು ಪಿಳಿ ಪಿಳಿ ನೋಡುತ್ತ ಕೇಳಿಸಿಕೊಳ್ಳುತ್ತಿವೆ ಎಂಬಂತೆ ಭಾಸವಾಯಿತು. ಆ ತಾರೆ ತುಂಬಿದ ಆಗಸದ ಕೆಳಗೆ ಮಾತು ಮುಗಿಸಿ ಮಲಗಲು ಹೋದೆವು. ಮಲಗಲು ಸ್ಲೀಪಿಂಗ್ ಬ್ಯಾಗ್ ಕೊಟ್ಟಿದ್ದರು. ಅದನ್ನು ನೋಡಿದ್ದೇ ಮೊದಲ ಬಾರಿ! ಅದನ್ನು ಬಳಸುವುದು ಹೇಗೆ ಅಂತೆಲ್ಲ ಅರಿತು ಅದನ್ನು ಕೆಳಗೆ ಹಾಕಿಕೊಂಡು ಮಲಗಿದ್ದಾಯ್ತು. ಚಳಿಗೆ ಅದೆಷ್ಟು ಬಾರಿ ಎಚ್ಚರವಾಯಿತೋ! ಅದೆಷ್ಟು ಬಾರಿ ತಾರೆಗಳೊಡನೆ ಮಾತಾಡುತ್ತ ನಿಂತೆನೋ! ಆ ದೇವರೆ ಬಲ್ಲ.




ದೇವರಿಯಾತಾಲ್ ಕ್ಯಾಂಪ್

          ಅಲ್ಲಿ ಶೌಚಾಲಯವೋ, ಗುಂಡಿ ತೋಡಿ ಟೆಂಟ್ ಹಾಕಿದಂತಹ ಶೌಚಾಲಯ! ಅದನ್ನು ಬಳಸುವುದು ಹೇಗೆಂದು ಕೇಳಿಕೊಂಡು ಜೀವನದಲ್ಲಿ ಮೊದಲ್ನೇ ಬಾರಿ ಟಿಶ್ಯು ಪೇಪರ್ ಬಳಸಿ ಕೆಲಸ ಮುಗಿಸಿ ಬಂದದ್ದಾಯ್ತು! ಫ್ರೆಶ್ ಆಗಿ ಮತ್ತೆ ಒಣಕಲು ಬ್ರೆಡ್ ತಿನ್ನಬೇಕಲ್ಲ ಎಂಬ ಬೇಜಾರಿನಲ್ಲಿ ಡಿನರ್ ಟೆಂಟ್ಗೆ ಹೋದರೆ ಬಿಸಿ ಬಿಸಿ ಮ್ಯಾಗಿ ಮತ್ತು ಪಾಸ್ತಾ ಇತ್ತು. ತಿಂದು ತಯಾರಾಗಿ ಹೊರಟೆವು. ಟಿ.ಟಿ.ಎಚ್ ಅವರು ನಮಗೆ ಎರಡು ಆಯ್ಕೆ ಕೊಟ್ಟಿದ್ದರು. ಎರಡನೇ ದಿನ ಒಂದೇ ಸಾರಿ ಬೇಸ್ ಕ್ಯಾಂಪ್ ತನಕ ಮರಳಿ ಹೋಗಿ ಅಲ್ಲಿಂದ ಗಾಡಿಯಲ್ಲಿ 'ಚೋಪ್ತಾ' ಕ್ಯಾಂಪ್ ತನಕ ತಲುಪುವುದು. ಇಲ್ಲವೇ ದೇವರಿಯಾತಾಲ್ ಇಂದ ಚೋಪ್ತಾ ವರೆಗೆ ೧೬ ಕಿ.ಮೀ ಚಾರಣ ಮಾಡುವುದು. ಚಾರಣಕ್ಕಾಗಿ ಬಂದಿದ್ದೇವೆ ಆದ್ದರಿಂದ ಚಾರಣವೇ ಮಾಡೋಣ ಎಂದು ನಿರ್ಧರಿಸಿ ಅದೇ ಯಾದಿಯಾಗಿ ಹೊರಟಿದ್ದೆವು. ಅದೆಷ್ಟು ಲೀಟರ್ ನೀರು, ಅದೆಷ್ಟು ಗ್ಲೂಕೋಸ್ ಹೋಗಿದೆಯೋ ಲೆಕ್ಕ ಇಟ್ಟವರಿಲ್ಲ! 'ರೋಹಿಣಿ ಭುಗಿಯಾಲ್' ಎಂಬ ಸುಂದರ ಜಾಗದಲ್ಲಿ ಊಟಕ್ಕೆ ನಿಲ್ಲುವ ನಿರ್ಧಾರವಾಗಿತ್ತು. ಹೆಣ ಭಾರದ ಚೀಲವನ್ನು ಹೊತ್ತು ಅಲ್ಲಿ ತನಕ ತಲುಪುವುದರೊಳಗೆ ಅರೆಜೀವವಾಗಿದ್ದೆವು. ಊಟ ಮಾಡಿ ಸ್ವಲ್ಪ ಹೊತ್ತು ಒರಗಿ ಮತ್ತೆ ಆ ಭಾರದ ಚೀಲವನ್ನು ಹೆಗಲಿಗೇರಿಸಿ ಹೊರಟೆವು. 


ಟ್ರೆಕ್ ಲೀಡ್ ರವಿಯ ಜೊತೆ ಬೆಂಗಳೂರು ಬಾಯ್ಸ್

ದಾರಿಯಲ್ಲಿ ಹಿಮ ಬಿದ್ದ ಕಾರಣಕ್ಕೆ ಸುತ್ತಮುತ್ತಲಿನ ಜಾಗಗಳು ಸೊಗಸಾಗಿ ಕಾಣಿಸುತ್ತಿದ್ದವು. ನಡೆದು ನಡೆದು, ಇನ್ನು ಒಂದೇ ಒಂದು ಹೆಜ್ಜೆ ಇಡಲಾಗುವುದಿಲ್ಲ ಎಂಬ ಸ್ಥಿತಿ ತಲುಪಿ ಕೂತು ಬಿಟ್ಟೆ. ಚೋಪ್ತಾ ತಲುಪಲು ಮತ್ತೂ ೩ ಕಿ.ಮೀ ನಡೆಯಬೇಕಿತ್ತು. ಕತ್ತಲಾದರೆ ಪರದಾಡಬೇಕು ಎಂದು ಇದ್ದ ಬದ್ದ ಶಕ್ತಿಯೆಲ್ಲ ಹಾಕಿ ನಡೆಯ ಹತ್ತಿದೆ. ವಿರಾಮ ತೆಗೆದುಕೊಳ್ಳುತ್ತ, ಸುಧಾರಿಸಿಕೊಳ್ಳುತ್ತ ಸೂರ್ಯ ಮುಳುಗುವಷ್ಟರಲ್ಲಿ ಚೋಪ್ತಾ ಕ್ಯಾಂಪ್ ತಲುಪಿದೆವು. ಟೆಂಟ್ ಒಳಗೆ ಚೀಲ ಎಸೆದು ಊಟ ಮಾಡಿ ಮಲಗಿದವರಿಗೆ ನಿದ್ದೆ ಹತ್ತಿದ್ದು, ಬೆಳಗಾದದ್ದು ಗೊತ್ತೇ ಆಗಲಿಲ್ಲ! ನಿದ್ದೆ ದಣಿವನ್ನು ತಕ್ಕ ಮಟ್ಟಿಗೆ ಆರಿಸಿತ್ತು.


ಚೋಪ್ತಾದ ತಾರೆಭರಿತ ಆಗಸವನ್ನು ಸೆರೆ ಹಿಡಿದ ಗೆಳೆಯ ಸುಧೀರ್  

          ಯಥಾಪ್ರಕಾರ ಇಲ್ಲೂ ಪರೀಕ್ಷಿತ್ ನಮ್ಮನ್ನು ಎಬ್ಬಿಸಿದ. ತಯಾರಾಗಿ ತಿಂಡಿ ಅಂತ ಕೊಟ್ಟ ಅವಲಕ್ಕಿ ಒಗ್ಗರಣೆ ಮತ್ತು ಓಟ್ಸನ್ನು ತಿಂದು ಕೊನೆಯ ದಿನದ ಚಾರಣಕ್ಕೆ ಅಣಿಯಾದೆವು. ಚಾರಣದ ಕೊನೆ, ಚಂದ್ರಶಿಲಾ ಬೆಟ್ಟದ ತುದೆಯೆಡೆಗೆ ಹೆಜ್ಜೆ ಇಡಲಾರಂಭಿಸಿದೆವು. ಚೋಪ್ತಾ ಕ್ಯಾಂಪಿನಲ್ಲೇ ಕೊನೆಯ ದಿನವೂ ತಂಗಬೇಕಾಗಿದ್ದರಿಂದ ಚೀಲವನ್ನು ಹೊತ್ತೊಯ್ಯುವ ಬಾಧೆಯಿರಲಿಲ್ಲ. ಅದೇ ನಮಗೆ ದೊಡ್ಡ ಸಮಾಧಾನದ ವಿಷಯವಾಗಿತ್ತು. ಚಂದ್ರಶಿಲಾಕ್ಕೂ ಮೊದಲು ತೃತೀಯ ಕೇದಾರ ಎಂಬ ಖ್ಯಾತಿಯ 'ತುಂಗನಾಥ' ದೇವಸ್ಥಾನ ಸಿಗುವುದೆಂದು ಹೇಳಿದರು. ತುಂಗನಾಥ ದೇವಸ್ಥಾನದವರೆಗೆ ಬರೀ ಮೆಟ್ಟಿಲುಗಳಿದ್ದ ಹಾದಿ.





 ನಾನು ಪರೀಕ್ಷಿತ್ ಕಷ್ಟಪಟ್ಟು ಸುಧಾರಿಸಿಕೊಳ್ಳುತ್ತ ಮೆಟ್ಟಿಲೇರುತ್ತಿದ್ದರೆ ಗೆಳೆಯ ಸುಖೇಶ್ ಮನೆಯಲ್ಲಿ ನಡೆದಾಡುವ ಹಾಗೆ ಆರಾಮವಾಗಿ ಹೋಗುತ್ತಿದ್ದ. ಸಂಕೇತ್ ಕೂಡ ಕೊಂಚ ಸಲೀಸಾಗೇ ಬೆಟ್ಟವೇರತೊಡಗಿದ. ತುಂಗನಾಥ ದೇವಸ್ಥಾನ ತಲುಪಿ ಕೈ ಮುಗಿದು, ದಣಿವಾರಿಸಿಕೊಂಡು ಮುಂದೆ ಹೊರಟೆವು.


ತುಂಗನಾಥ ದೇವಸ್ಥಾನ 
ಅಲ್ಲಿಂದ ಚಂದ್ರಶಿಲಾ ತುದಿ ಕಾಣಿಸುತ್ತಿತ್ತು. ಆ ಎತ್ತರ ಒಮ್ಮೆ ದಂಗುಬಡಿಸಿತು. ಮುಂದೆ ನಡೆಯುವ ಹಾದಿ ದುರ್ಗಮವಾಗಿಯೂ, ಕಷ್ಟಕರವಾಗಿಯೂ, ಬಲ ಭಾಗದಲ್ಲಿದ್ದ ಭಾರೀ ಪ್ರಪಾತಗಳು ಭಯ ಹುಟ್ಟಿಸುವಂತೆಯೂ ಇತ್ತು. ಪುರಂದರದಾಸರ ಗೀತೆಯಲ್ಲಿ ಬರುವ ಸಾಲು "ಹೆಜ್ಜೆಯ ಮೇಲೊಂದ್ ಹೆಜ್ಜೆಯನಿಕ್ಕುತ" ಎಂಬಂತೆ ಬಸವನಹುಳುವಿನ ಹಾಗೆ ಹೆಜ್ಜೆ ಹಾಕುತ್ತಿದ್ದೆವು. ತುದಿಯನ್ನು ನೋಡಿದರೆ ಸುಖೇಶ್ ಮತ್ತು ಸಂಕೇತ್ ಮೊದಲಿಗರಾಗಿ ತಲುಪಿ, ಬೇಗ ಬನ್ನಿ ಎಂದು ನಮ್ಮೆಡೆಗೆ ಕೈ ಬೀಸುತ್ತಿದ್ದರು. ಉಳಿದವರಿಗೂ ಪ್ರೇರೇಪಿಸುತ್ತಾ, ನಾವೂ ಅವರಿಂದ ಶಕ್ತಿ ತುಂಬಿಸಿಕೊಳ್ಳುತ್ತಾ, ಏದುಸಿರು ಬಿಡುತ್ತಾ ತುದಿಯನ್ನು ತಲುಪಿಯೇ ಬಿಟ್ಟೆವು!




          ಏನೋ ಸಂತಸ! ಒಲಂಪಿಕ್ಸ್ನಲ್ಲಿ ಪದಕ ಗೆದ್ದೆವೆಂಬಂತ ಉಲ್ಲಾಸ! ಸ್ವಲ್ಪ ಸುಧಾರಿಸಿಕೊಂಡು ಸುತ್ತಲೂ ಕಣ್ಣಾಡಿಸಿದೆ. ಎಂತಹ ನೋಟ! ದೇವರು ಸ್ವಲ್ಪ ಜಾಸ್ತಿ ಸಮಯ ಇಟ್ಟುಕೊಂಡು ಸೃಷ್ಟಿಸಿದ ಸುಂದರ ಚಿತ್ರದಂತಿತ್ತು! ಬರೀ ಚಿತ್ರಗಳಲ್ಲಿ ನೋಡಿ ಆನಂದಿಸಿದ ಹಿಮಾಲಯದ ಅಂದ ಕಣ್ಣ ಮುಂದಿತ್ತು. ನಂಬಲಾಗಲಿಲ್ಲ. ಅತ್ತ ಇತ್ತ ಎತ್ತ ನೋಡಿದರೂ ಭವ್ಯ ಬೆಟ್ಟಗಳ ಸಾಲು! ಅವುಗಳ ಮುಂದೆ ನಾವೆಷ್ಟು ಚಿಕ್ಕವರು ಎಂಬ ಯೋಚನೆ ಬರತೊಡಗಿತು. 


ಕಳ್ದ್ ಹೋದೆ ಗುರು! 

ಅಲ್ಲಿದ್ದ ಪಂಚಮುಖಿ ಶಿವನಿಗೆ ಕೈ ಮುಗಿದು "Successfully completed" ಬ್ಯಾನರ್ ಮುಂದೆ ಎಲ್ಲರು ನಿಂತು ಕಿರಚಾಡುತ್ತ ಚಿತ್ರ ತೆಗೆಸಿಕೊಂಡೆವು. ಮುಂದೆ ಯಾರದರೂ ಕೇಳಿದರೆ ತೋರಿಸಲು ಬೇಕಲ್ಲವೇ!



 ನೆನಪಿಗೆ ಮತ್ತೊಂದಿಷ್ಟು ಚಿತ್ರಗಳನ್ನು ತೆಗೆದುಕೊಂಡು ಬೆಟ್ಟಗಳ ಸಾಲಿಗೆ ನಮಸ್ಕರಿಸಿ, ಹಿಮದೊಂದಿಗೆ ಆಡುತ್ತ ಚೋಪ್ತಾ ಕ್ಯಾಂಪಿನತ್ತ ಹೊರಟೆವು.



ಚಾರಣ ಮುಗಿಸಿದ ಖುಷಿಗೆ ಊಟಕ್ಕೆ ತುಪ್ಪ ಸವರಿದ ಚಪಾತಿ, ಪನ್ನೀರ್ ಪಲ್ಯ, ಗುಲಾಬ್ ಜಾಮೂನ್ ಎಲ್ಲ ಮಾಡಿದ್ದರು! ಚೆನ್ನಾಗಿ ತಿಂದು ಡಿನ್ನರ್ ಟೆಂಟ್ನಲ್ಲಿ ಎಲ್ಲರೂ ಅಂತ್ಯಾಕ್ಷರಿ ಆಡಿ, ಹೋಗಿ ಮಲಗಿದೆವು. ಇಷ್ಟು ದಿನ ಕಾಡುತ್ತಿದ್ದ ಸ್ಲೀಪಿಂಗ್ ಬ್ಯಾಗ್, ಟೆಂಟ್ ಎಲ್ಲ ಅಂದೇ ಕೊನೆ ಎಂದಾಗ ನೋವು ನಿಧಾನಕ್ಕೆ ಕಾಡತೊಡಗಿತು. ಹಿಮಾಲಯದ ತಪ್ಪಲಿನಲ್ಲಿನ ಕೊನೆಯ ನಿದ್ದೆಯದು! 

          ಬೆಳೆಗೆದ್ದಾಗ ಚಾರಣ ಮುಗಿಸಿದ್ದಕ್ಕೆ ಟಿ.ಟಿ.ಎಚ್ ಅವರು ನಮಗೆಲ್ಲ ಪ್ರಶಂಸಾ ಪತ್ರಗಳನ್ನು ನೀಡಿದರು. ಎಲ್ಲರೂ ತಮ್ಮ ತಮ್ಮ ಅನುಭವಗಳನ್ನು ಹಂಚಿಕೊಂಡು ಕೊನೆಗೊಂದು ಇಡೀ ಗುಂಪಿನ ತನ್ನಿ ತೆಗೆದುಕೊಂಡು ಗಾಡಿ ಹತ್ತಿ ಹೃಶಿಕೇಷದತ್ತ ಹೊರಟೆವು.



          ೩೧ಕ್ಕೆ ದೆಹಲಿಯಿಂದ ಬಾನೋಡದಲ್ಲಿ ಬೆಂಗಳೂರಿಗೆ ಹಿಂದಿರುಗಿ ಬರುವವರಿದ್ದೆವು. ಹೃಶಿಕೇಷದಲ್ಲಿ ಒಂದು ದಿನ ತಂಗಿ ಮರುದಿನ ಕಾರಿನಲ್ಲಿ ದೆಹಲಿಯತ್ತ ಹೊರಟೆವು. ಪ್ರತೀ ಬಾರಿ ಪ್ರವಾಸ ಮುಗಿಯುವಾಗ ಆಗುವ ಸಂಕಟ ಹೇಳತೀರದು. ವಾಪಾಸ್ ಹೋದ ಮೇಲೆ ಮತ್ತೆ ಅದೇ ಟ್ರಾಫಿಕ್ಕು, ಅದೇ ಆಫೀಸು, ಅದೇ ತಲೆನೋವು ಎಲ್ಲ ನೆನಪಾಗಿ ಹಿಂದಿರುಗಿ ಬರಲು ಮನಸ್ಸಾಗುವುದೇ ಇಲ್ಲ! ಆದರೆ ಇದೇ ಮೊದಲ ಬಾರಿಗೆ ಪ್ರವಾಸ ಮುಗಿದ ಬೇಸರದ ಭಾವವಿರಲಿಲ್ಲ! ಮರಳಿ ಬೆಂಗಳೂರಿಗೆ ಬರಲು ಮನಸ್ಸು ತುಡಿಯುತ್ತಿತ್ತು. ಕಾರಣ ಒಂದೇ, ಬಂದ ತಕ್ಷಣ ನೋಡಬೇಕೆಂದು ಉತ್ತರ ಪ್ರದೇಶದಲ್ಲಿದ್ದಾಗಲೇ ಬುಕ್ ಮೈ ಶೋನಲ್ಲಿ ಬುಕ್ ಮಾಡಿದ ನಾನು ಬಹಳ ನಿರೀಕ್ಷೆಯಿಂದ ಕಾಯುತ್ತಿದ್ದ ಸಿನೆಮಾ 'ಕಿರಿಕ್ ಪಾರ್ಟಿ'! :) ಪ್ರವಾಸದ ಗುಂಗಿಂದ ಸುಲಭವಾಗಿ ಹೊರಬರುವಂತೆ ಮಾಡಿದ ಕಿರಿಕ್ ಪಾರ್ಟಿಗೆ ನಾನು ಋಣಿ.

          ನನ್ನ ಪ್ರಕಾರ ಪ್ರತಿಯೊಬ್ಬರು ಒಮ್ಮೆಯಾದರೂ ಹಿಮಾಲಯ ಚಾರಣಕ್ಕೆ ಹೋಗಲೇಬೇಕು! ಅದು, ಜೀವನದಲ್ಲಿ ನಾವು 'ಟೇಕನ್ ಫಾರ್ ಗ್ರಾಂಟೆಡ್' ನಿಲುವು ತೋರಿಸುವ ಹಲವಾರು ವಿಷಯಗಳನ್ನು ಮನವರಿಕೆ ಮಾಡಿಕೊಡುತ್ತೆ. ಅಲ್ಲಿ ಚಳಿಗೆ ೪-೫ ಲೇಯರ್ ಬಟ್ಟೆ ಹಾಕಿಕೊಂಡೇ ದಿನ ಕಳೆಯುವಾಗ, ಇಲ್ಲಿ ಅಂಗಿ - ಚಡ್ಡಿ ಹಾಕಿಕೊಂಡು ಅಡ್ಡಾಡುವುದೂ ಒಂದು ಭಾಗ್ಯ ಎಂಬ ಅರಿವು! ಸ್ಲೀಪಿಂಗ್ ಬ್ಯಾಗಿನಲ್ಲಿ ಹೊಡಕಲು ಆಗದೆ ಮುದುರಿಕೊಂಡು ಮಲಗುವಾಗ, ಮೆತ್ತನೆ ಹಾಸಿಗೆಯ ಮೇಲೆ ಕಾಲು ಚಾಚಿ ಮಲಗುವುದೂ ಒಂದು ಭಾಗ್ಯ ಎಂಬ ಅರಿವು! ಆ ಚಳಿಗೆ ಸ್ನಾನ ಮಾಡಲು ಆಗದಿದ್ದಾಗ, ಬಿಸಿ ನೀರಲ್ಲಿ ಪ್ರತಿ ನಿತ್ಯ ಸ್ನಾನ ಮಾಡುವುದೂ ಒಂದು ಭಾಗ್ಯ ಎಂಬ ಅರಿವು! ಮೊಬೈಲ್ ನೆಟ್ವರ್ಕ್ ಇಲ್ಲದ ಜಾಗದಲ್ಲಿದ್ದದ್ದರಿಂದ, ನಮಗೆ ಬೇಕಾದವರ ಬಳಿ ಬೇಕಾದಾಗ ಕರೆ ಮಾಡಿ ಮಾತನಾಡುವುದೂ ಒಂದು ಭಾಗ್ಯ ಎಂಬ ಅರಿವು! ನಾವಿಲ್ಲಿ ಗಣನೆಗೆ ತೆಗೆದುಕೊಳ್ಳದ ಹಲವಾರು ಚಿಕ್ಕ ಚಿಕ್ಕ ಸಂಗತಿಗಳೂ ಅಲ್ಲಿ ಭಾಗ್ಯಗಳಂತೆ ಗೋಚರಿಸುತ್ತಿದ್ದವು!

ನೀವು ಚೋಪ್ತಾ - ಚಂದ್ರಶಿಲಾ ಚಾರಣಕ್ಕೆ ಹೋಗುವುದಾದರೆ ದಯವಿಟ್ಟು ಅವರು ಸೂಚಿಸಿದಂತೆ ವ್ಯಾಯಾಮ ಮಾಡಿ ದೇಹವನ್ನು ಪಳಗಿಸಿಕೊಂಡು ಹೋಗಿ. ಇಲ್ಲವಾದಲ್ಲಿ ಸುಂದರ ನೋಟವನ್ನು ಅನುಭವಿಸುವ ಬದಲು ನರಳಿ, ಹೆಣಗಾಡಿ ಬೆಟ್ಟವೇರುವ ಸ್ಥಿತಿ ಎದುರಾಗಬಹುದು!
https://www.trekthehimalayas.com/fitness-for-trekking/exercise-charts/easy/

ಚಾರಣಕ್ಕೆ ಯಾವ ಯಾವ ಸಾಮಗ್ರಿಗಳು ಬೇಕೆಂಬ ಪಟ್ಟಿಯನ್ನು ಇಲ್ಲಿ ಕೊಟ್ಟಿದ್ದಾರೆ. ಅದು ಬೇಡ ಇದು ಬೇಡ ಎಂದು ಅಸಡ್ಡೆ ಮಾಡದೆ ಸೂಚಿಸಿದ ಎಲ್ಲವನ್ನೂ ತೆಗೆದುಕೊಂಡು ಹೋಗಿ.
https://www.trekthehimalayas.com/tth-treks/Chopta-Chandrashila-Deoria-Tal-Trek/#essential

          ಚೋಪ್ತಾ - ಚಂದ್ರಶಿಲಾ ೫ ದಿನದ ಚಾರಣವಾಗಿದ್ದು; ಹೋಗುವುದಾದರೆ, ನೀವು ದೆಹಲಿ ತಲುಪಿ ಅಲ್ಲಿಂದ ಬಸ್ ಅಥವಾ ಮಸ್ಸೂರಿ ಎಕ್ಸ್ಪ್ರೆಸ್ ಅಲ್ಲಿ ಹರಿದ್ವಾರ/ಹೃಶಿಕೇಷವನ್ನು ತಲುಪಬೇಕು. ಅಲ್ಲಿಂದ ಟಿ.ಟಿ.ಎಚ್ ಅವರ ಗಾಡಿಯಲ್ಲಿ ಸಾರಿ ಬೇಸ್ ಕ್ಯಾಂಪನ್ನು ತಲುಪಬಹುದು. ವಾಪಾಸ್ ಬರುವಾಗಲೂ ಹರಿದ್ವಾರ/ಹೃಶಿಕೇಷದವರೆಗೆ ಅವರು ನಿಮ್ಮನ್ನು ತಲುಪಿಸುತ್ತಾರೆ. 

          ಹೆಚ್ಚಿನ ದಿನಗಳಿದ್ದರೆ ನೀವು, ಹೃಶಿಕೇಷದಲ್ಲಿ ಬಂಜಿ ಜಂಪ್, ರಿವರ್ ರಾಫ್ಟಿಂಗ್, ಝಿಪ್ ಲೈನಿಂಗ್ ಕೂಡಾ ಮಾಡಬಹುದು. ಇದರ ಬಗ್ಗೆ ಮುಂದಿನ ಬಾರಿ ಬರೆಯುವೆ. ೨೫ ರಿಂದ ೩೦ ಸಾವಿರದಲ್ಲಿ ಜೀವನುದ್ದಕ್ಕೂ ನೆನೆಯುವಂತಹ ಪ್ರವಾಸ ಮಾಡಲಿಚ್ಚಿಸಿದರೆ, ಈ ಪ್ರವಾಸ ಹೇಳಿ ಮಾಡಿಸಿದ್ದು!


ನೆನಪಲ್ಲುಳಿಯುವ ಚಿತ್ರ!

          ಹಿಮಾಲಯ, ಮನುಷ್ಯ ಜೀವನವನ್ನು ನೋಡುವ ರೀತಿಯನ್ನು ಬದಲಾಯಿಸುವುದರಲ್ಲಿ ಅನುಮಾನವಿಲ್ಲ! ಒಮ್ಮೆ ಹೋಗಿ ಬನ್ನಿ! ಅನುಭವವ ಪಡೆದು ಬನ್ನಿ! ಹೋದದ್ದೇ ಆದರೆ, ಆ ದೈತ್ಯ ಬೆಟ್ಟಗಳಿಗೆ ನನ್ನ ಅನಂತಾನಂತ ನಮಸ್ಕಾರಗಳನ್ನು ತಿಳಿಸಿ ಬನ್ನಿ!